ಮುಡಿಪು: ದೌರ್ಜನ್ಯ ಮುಕ್ತ ಗ್ರಾಮ ನಿರ್ಮಾಣಕ್ಕೆ ನಾವೆಲ್ಲರೂ ಕಂಕಣ ಬದ್ಧರಾಗಿ ಹೋರಾಡೋಣ. ಪ್ರಪ್ರಥಮವಾಗಿ ನಮ್ಮ ಮನೆ, ಪರಿಸರಗಳನ್ನು ದೌರ್ಜನ್ಯದಿಂದ ಮುಕ್ತಗೊಳಿಸಿ ಗಾಂಧೀಜಿಯವರ ‘ರಾಮರಾಜ್ಯದ ಕನಸು’ ನನಸಾಗಿಸೋಣ ಎಂದು ಮೇರಮಜಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ಸುಗ್ರಾಮ ಒಕ್ಕೂಟದ ಜಿಲ್ಲಾ ಪ್ರತಿನಿಧಿ ವೃಂದಾ ಅವರು ಹೇಳಿದರು.
ಅವರು ಬುಧವಾರ ಮೇರಮಜಲು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ಮಹಿಳಾ ದೌರ್ಜನ್ಯ ತಡೆ ಅಭಿಯಾನದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ದಿಹಂಗರ್ ಪ್ರಾಜೆಕ್ಟ್ನ ಲೆಕ್ಕ ಪರಿಶೋಧಕ ವೇದವ್ಯಾಸ ಪರ್ಗಿ ಅವರು ಮಾತನಾಡಿ ಮಹಿಳಾ ದೌರ್ಜನ್ಯದ ತಡೆಗೆ ಪ್ರತಿಯೊಬ್ಬರು ಎಚ್ಚತ್ತುಕೊಳ್ಳುವ ಅವಶ್ಯಕತೆಯಿದೆ. ಮಹಿಳೆಯರು ದೌರ್ಜನ್ಯದ ವಿರುದ್ಧ ಹೋರಾಡಲು ಸಂಘಟಿತರಾಗಬೇಕು ಎಂದರು.
ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಅವರು ಮಹಿಳಾ ದೌರ್ಜನ್ಯದ ವಿರುದ್ಧ ಹೋರಾಡಲು ಸಂಘಟಿತರಾಗುವಂತೆ ಕೋರಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವತ್ಸಲಾ ನಾಯಕ್ ಅವರು ಮಹಿಳೆಯರಿಗೆ ಉಂಟಾಗುತ್ತಿರುವ ದೌರ್ಜನ್ಯವನ್ನು ತಿಳಿಸಿದರು
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಲಾಲ್ ಶರವಣ್, ಮಾಜಿ ಅಧ್ಯಕ್ಷರಾದ ಯೋಗೀಶ್, ಮಹಮ್ಮದ್ ಉಪಸ್ಥಿತರಿದ್ದರು.