ಮುದ್ದೇಬಿಹಾಳ: ತಾಲ್ಲೂಕಿನ ಹದಗೆಟ್ಟ ರಸ್ತೆಗಳನ್ನು ದುರಸ್ತಿಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ನಡೆದ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಜಯ ಕರ್ನಾಟಕ ಸಂಘಟನೆ ಕರೆ ನೀಡಿದ್ದ ಬಂದ್ ಬೆಳಿಗ್ಗೆ 8 ಗಂಟೆಯಿಂದಲೇ ಆರಂಭಗೊಂಡು ಸಂಜೆ 5ರ ವರೆಗೆ ನಡೆಯಿತು. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದವು. ರೊಚ್ಚಿಗೆದ್ದ ಜನರ ಪ್ರಶ್ನೆಗಳಿಗೆ ಕೃಷ್ಣಾ ಭಾಗ್ಯ ಜಲ ನಿಗಮ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಉತ್ತರ ನೀಡಲಾಗಲಿಲ್ಲ.
ಎ.ಪಿ.ಎಂ.ಸಿ. ವರ್ತಕರ ಸಂಘದ ಕಾರ್ಯದರ್ಶಿ ಬಿ.ಎಸ್. ಮೇಟಿ, ಜಯ ಕರ್ನಾಟಕ ಸಂಘಟನೆಯ ರವಿ ಜಗಲಿ ಮಾತನಾಡಿ, ರಸ್ತೆಗಳ ದುರವಸ್ಥೆ ಕುರಿತು ವಿವರಿಸಿದರು ಅಲ್ಲದೇ ದುರಸ್ತಿಗಾಗಿ ಆಗ್ರಹಿಸಿದರು.
`ಈಗ ರೂ.3 ಕೋಟಿ ಬಂದಿದೆ, ಅದರಿಂದ ಪ್ಯಾಚ್ ವರ್ಕ್ ಮುಗಿಸುತ್ತೇವೆ. ರಸ್ತೆ ನಿರ್ಮಾಣ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಇನ್ನೂ ಅನುಮತಿ ಸಿಕ್ಕಿಲ್ಲ. ಸ್ಥಳೀಯ ಜನಪ್ರತಿನಿಧಿಗಳೂ ಸರ್ಕಾರದ ಮೇಲೆ ಒತ್ತಡ ಹೇರಬೇಕು~ ಎಂದು ಕೆ.ಬಿ.ಜೆ.ಎನ್.ಎಲ್. ಅಧಿಕಾರಿ ವಿ.ವಿ. ಸೀರಿ ಹೇಳಿದಾಗ, ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ದುರಸ್ತಿಗೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಪ್ರತಿಭಟನಾಕಾರರು ತಹಶೀಲ್ದಾರ ರಿಗೆ ಆಗ್ರಹಿಸಿದರು.
ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ವಿಜುಗೌಡ ಬಿರಾದಾರ, ತಾಲ್ಲೂಕು ಘಟಕದ ಅಧ್ಯಕ್ಷ ಮಾರುತಿ ಹಿಪ್ಪರಗಿ, ವಾಸು ಶಾಸ್ತ್ರಿ, ಬಾಬು ಬಿರಾದಾರ, ಸಿದ್ಧರಾಜ ಹೊಳಿ, ರಾಜೇಂದ್ರ ರಾಯಗೊಂಡ, ಮೆಹಬೂಬ್ ಗೊಳಸಂಗಿ, ಮಹೀಂದ್ರ ಓಸ್ವಾಲ, ಜಬ್ಬಾರ್ ಗೋಲಂದಾಜ ಪಾಲ್ಗೊಂಡಿದ್ದರು.
ವಕೀಲರ ಸಂಘ, ಎ.ಪಿ.ಎಂ.ಸಿ. ವರ್ತಕರು, ಕಿರಾಣಿ ವರ್ತಕರು, ಸಂಜೀವಿನಿ ಯುವಕ ಸಂಘ, ಕ್ರಿಯೇಟಿವ್ ಫ್ರೆಂಡ್ಸ್ ಕ್ಲಬ್, ನಗರಾಭಿವೃದ್ಧಿ ಹೋರಾಟ ವೇದಿಕೆ, ಮಹಿಳಾ ಸಂಘಟನೆಗಳು ಬಂದ್ಗೆ ಬೆಂಬಲಿಸಿದ್ದವು.