ಕೊಪ್ಪಳ: ಜಿಲ್ಲಾ ಜೆಡಿಎಸ್ನಲ್ಲಿದ್ದ ಅಸಮಾಧಾನ ಭಾನುವಾರ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ, ರಾಜ್ಯ ಘಟಕದ ಅಧ್ಯಕ್ಷ ಎ.ಕೃಷ್ಣಪ್ಪ ಅವರ ಮುಂದೆಯೇ ಮುಖಂಡರ ಮಾತಿನಲ್ಲಿ ವ್ಯಕ್ತವಾಯಿತು. ಕೊನೆಗೆ ಮುಖಂಡರಿಗೆ ಗೌಡರು ಬುದ್ದಿವಾದ ಹೇಳಿ ಸಮಾಧಾನಿಸಿದರು.
ಇಲ್ಲಿನ ಭಾಗ್ಯನಗರ ರಸ್ತೆಯ ಪಾನಘಂಟಿ ಸಭಾಂಗಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಕೆ.ಶರಣಪ್ಪ ಅವರು ತಮ್ಮ ಭಾಷಣದಲ್ಲಿ, ಶಾಸಕರ ಆಪ್ತ ಕಾರ್ಯದರ್ಶಿ ಆಗಿದ್ದ ಎಸ್.ಬಿ.ಖಾದ್ರಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಎಲ್ಲವೂ ಹೀಗೇ ನಿರ್ಧಾರವಾಗುವುದಾದರೆ ಪಕ್ಷ ಸಂಘಟನೆ ಹೇಗೆ ಸಾಧ್ಯ? ಎಂದು ಪರೋಕ್ಷವಾಗಿ ಅನ್ಸಾರಿ ಅವರನ್ನು ಕುಟುಕಿದರು.
ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಇಕ್ಬಾಲ್ ಅನ್ಸಾರಿ, ನಾನೇನು ಖಾದ್ರಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಶಿಫಾರಸು ಮಾಡಲಿಲ್ಲ. ಅಂದುಪಕ್ಷ ಸಂಘಟನೆಗೆ ಮುಂದೆ ಬರುವವರು ಯಾರೂ ಇರಲಿಲ್ಲ. ಪರಿಸ್ಥಿತಿ ಹಾಗಿತ್ತು. ಅನಿವಾರ್ಯವಾಗಿ ರಾಜ್ಯ ಘಟಕದ ಸೂಚನೆ ಮೇರೆಗೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಒಂದು ವೇಳೆ ಅವರ ಮೇಲೆ ಅಸಮಾಧಾನ ಇದ್ದರೆ ಅಧ್ಯಕ್ಷರನ್ನು ಬದಲಾಯಿಸಿ ಯಾರು ಬೇಕಾದರೂ ಮುಂದೆ ಬಂದು ಪಕ್ಷ ಸಂಘಟನೆ ಮಾಡಬಹುದು. ಜೆಡಿಎಸ್ನಲ್ಲಿ ಶಾಸಕರಾಗಿ ಆಯ್ಕೆಯಾಗಿ, ಪಕ್ಷ ಬದಲಿಸಿ ಮತ್ತೆ ವಾಪಸ್ ಬಂದು ಸಂಘಟನೆ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಕುಟುಕಿದರು.
ಪರಿಸ್ಥಿತಿ ಬಿಗಡಾಯಿಸುವುದನ್ನು ಅರಿತ ದೇವೇಗೌಡರು, ಹಿಂದಿನ ಕಹಿ ಘಟನೆಗಳನ್ನು ಮತ್ತೆ ಪ್ರಸ್ತಾಪಿಸಬಾರದು. ಒಟ್ಟಿನಲ್ಲಿ ಪಕ್ಷ ಸಂಘಟನೆ ಮುಖ್ಯ. ಮುಖಂಡರೊಳಗಿನ ಭಿನ್ನಾಭಿಪ್ರಾಯ ಬದಿಗಿಟ್ಟು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು. ಹೀಗೆ ಮುಖಂಡರು ಬಹಿರಂಗವಾಗಿ ಜಗಳವಾಡುವುದು ಸರಿಯಲ್ಲ. ಎಲ್ಲರೂ ಹೊಂದಾಣಿಕೆಯಿಂದ ಇರಬೇಕು ಎಂದು ಬುದ್ದಿವಾದ ಹೇಳಿದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಬಿ.ಖಾದ್ರಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಬ್ದುಲ್ ಅಜೀಂ ಸೇರಿದಂತೆ ಹಿರಿಯ ಮುಖಂಡರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.