ನವದೆಹಲಿ (ಪಿಟಿಐ): ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಹಾಗೂ ಅವರ ಪುತ್ರರಾದ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ವಿರುದ್ಧ ಇರುವ ಪ್ರಕರಣದ ವಿಚಾರಣೆಯನ್ನು ಮುಂದುವರಿಸುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶನ ನೀಡಿತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಲ್ತಮಸ್ ಕಬೀರ್ ಹಾಗೂ ಎಚ್.ಎಲ್.ದತ್ತು ಅವರನ್ನು ಒಳಗೊಂಡ ನ್ಯಾಯಪೀಠವು ಮುಲಾಯಂ ಅವರ ಸೊಸೆ ಹಾಗೂ ಅಖಿಲೇಶ್ ಅವರ ಪತ್ನಿ ಡಿಂಪಲ್ ಯಾದವ್ ವಿರುದ್ಧದ ಆರೋಪವನ್ನು ಕೈ ಬಿಟ್ಟಿದ್ದು, ಅವರು ಖಾಸಗಿ ವ್ಯಕ್ತಿಯಾಗಿದ್ದು, ಅವರು ಯಾವುದೇ ಸಾರ್ವಜನಿಕ ಅಧಿಕಾರ ಹೊಂದಿಲ್ಲ ಎಂದು ಹೇಳಿದೆ.
ಇದೇ ವೇಳೆ ನ್ಯಾಯಪೀಠವು 2007ರ ಮಾರ್ಚ್ 1ರಂದು ನೀಡಿದ್ದ ಆದೇಶ ತಿದ್ದುಪಡಿಗೊಳಿಸಿತಲ್ಲದೇ, ಪ್ರಕರಣದ ವಿಚಾರಣೆಯ ವರದಿಯನ್ನು ಸರ್ಕಾರಕ್ಕೂ ಮೊದಲು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶಿಸಿತು.