ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಲಿನಲ್ಲಿ ಹೆಚ್ಚು, ಶ್ರೀನಿವಾಸಪುರದಲ್ಲಿ ಕಡಿಮೆ:ಮಳೆಯಾಟದ ಮಧ್ಯೆ ಬಿತ್ತನೆ

Last Updated 25 ಜುಲೈ 2012, 7:45 IST
ಅಕ್ಷರ ಗಾತ್ರ

ಕೋಲಾರ: ಇದುವರೆಗೆ ಮೂರು ಬಾರಿ ಉಳುಮೆ ಮಾಡಿರುವೆ. ಈಗ ಅಲಿವೆ (ನೆಲವನ್ನು ಬಿತ್ತನೆಗೆ ಹದಗೊಳಿಸುವ ಸಾಧನ) ಬಳಸಿ ಸಮಗೊಳಿಸಿರುವೆ. ಸಂಜೆ ಮಳೆ ಬಂದರೂ ಬಿತ್ತನೆ ಮಾಡಬಹುದು. ಆದರೆ ಮಳೆ ಬರಬೇಕಲ್ಲ?

-ತಾಲ್ಲೂಕಿನ ಕಾಮಧೇನುಹಳ್ಳಿಯ ರೈತ ಜಿ.ಪ್ರಕಾಶ್ ಮಂಗಳವಾರ ಮಧ್ಯಾಹ್ನ ತಮ್ಮ ಜಮೀನನ್ನು ಹದಗೊಳಿಸಿ ವಿಶ್ರಾಂತಿಗೆ ಕುಳಿತು ಆಕಾಶದ ಕಡೆಗೆ ನೋಡುತ್ತಾ ಹೇಳಿದ ಮಾತಿದು. 10 ದಿನದ ಹಿಂದೆ ಭರ್ಜರಿ ಮಳೆ ಬಂದಾಗ ಅವರ ಜಮೀನಿನಲ್ಲಿ ಹಿಪ್ಪುನೇರಳೆ ಬೆಳೆ ಇತ್ತು. ಅದನ್ನು ತೆಗೆದು ಖುಷ್ಕಿ ಬೇಸಾಯ ಶುರು ಮಾಡಲು ಹೊರಟ ಅವರಿಗೆ ಮಳೆಯಾಟ ಚಿಂತೆಗೀಡು ಮಾಡಿದೆ. ಅವರ ಜಮೀನಿನ ಪಕ್ಕದಲ್ಲೇ ಬೇರೊಬ್ಬ ರೈತರು ಬಿತ್ತನೆ ಮಾಡಿದ್ದ ರಾಗಿ ಪೈರು ನಳನಳಿಸುತ್ತಿವೆ.

ಹೀಗೆ ಮುಂಗಾರು ಮಳೆಯ ಕಣ್ಣಾಮುಚ್ಚಾಲೆ ಆಟದ ನಡುವೆ ಜಿಲ್ಲೆಯ ರೈತರು ಬಿತ್ತನೆ ದಾರಿಯಲ್ಲಿ ಮುಂದುವರಿದಿದ್ದಾರೆ. ಹಲವರು ಬಿತ್ತನೆ ಮಾಡಿದ ನೆಲದಲ್ಲಿ ರಾಗಿ ಪೈರುಗಳು ಬಂದಿವೆ. ಕಳೆದ ವಾರ ಒಂದೆರಡು ದಿನ ಸುರಿದ ಮಳೆ ಪರಿಣಾಮವಾಗಿ ಈ ವಾರದಲ್ಲಿ ಬಿತ್ತನೆ ಇನ್ನಷ್ಟು ಚುರುಕು ಪಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ `ಪರವಾಗಿಲ್ಲ~ ಎಂಬ ಸನ್ನಿವೇಶವಿದೆ.

ಜುಲೈ 14ರ ರಾತ್ರಿಯಿಂದ ಆರಂಭವಾದ ಮಳೆ ಸೋಮವಾರದವರೆಗೂ ಆಗಾಗ ಬಿಡುವು ನೀಡಿ ಸುರಿದಿತ್ತು. 15ರಂದು ಸುರಿದ ಗಟ್ಟಿ ಮಳೆ ಇಲ್ಲಿವರೆಗೆ ಜಿಲ್ಲೆಯಲ್ಲಿ ಬಿತ್ತನೆಯನ್ನು ಕೈಹಿಡಿದಿದೆ.ಬಯಲುಸೀಮೆ ಪ್ರಧಾನ ಬೆಳೆಯಾದ ರಾಗಿ ಜುಲೈ 24ರವರೆಗೆ 19 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ತೊಗರಿ 2200 ಹೆ., ನೆಲಗಡಲೆ 8300 ಹೆ., ಎಳ್ಳು 226 ಹೆಕ್ಟೇರ್ ಬಿತ್ತನೆಯಾಗಿದೆ. ಜಿಲ್ಲೆಯ 1.2 ಲಕ್ಷ ಹೆಕ್ಟೇರ್‌ನಲ್ಲಿ ಕೃಷಿ ಚಟುವಟಿಕೆ ನಡೆಯಬೇಕಾಗಿದ್ದು, ಇಲ್ಲಿವರೆಗೆ ಒಟ್ಟು 32,734 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ವೇಳೆಗೆ 24,225 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿತ್ತು.

ಮುಳಬಾಗಲು ತಾಲ್ಲೂಕಿನಲ್ಲಿ ಅತಿ ಹೆಚ್ಚು 18,068 ಹೆ (ಶೇ 69) ಬಿತ್ತನೆಯಾಗಿದ್ದರೆ, ಶ್ರೀನಿವಾಸಪುರದಲ್ಲಿ ಅತಿ ಕಡಿಮೆ 1,481 ಹೆ (ಶೇ 9) ಬಿತ್ತನೆಯಾಗಿದೆ. ಉಳಿದಂತೆ ಬಂಗಾರಪೇಟೆಯಲ್ಲಿ 6203 ಹೆ (ಶೇ 26), ಮಾಲೂರಿನಲ್ಲಿ 3330 ಹೆ (ಶೇ 21) ಮತ್ತು ಕೋಲಾರದಲ್ಲಿ 3646 (ಶೇ 19) ಬಿತ್ತನೆಯಾಗಿದೆ.

ಮಳೆ ಹೆಚ್ಚು: ಕೃಷಿ ಇಲಾಖೆ ಪ್ರಕಾರ ಈ ಬಾರಿ ಸರಾಸರಿ 263ಮಿ.ಮೀಗಿಂತಲೂ ಹೆಚ್ಚು ಮಳೆಯಾಗಿದೆ. ಏಪ್ರಿಲ್-ಮೇ ತಿಂಗಳಲ್ಲಿ ಸುರಿದ ಮಳೆ, ಕಳೆದ ವಾರ ಸುರಿದ ಮಳೆ ಹೆಚ್ಚು ಲಾಭಕರವಾಗಿದೆ ಎನ್ನುತ್ತಾರೆ ಇಲಾಖೆ ಜಂಟಿ ನಿರ್ದೇಶಕ ಚಿಕ್ಕಣ್ಣ.

ಕಳೆದ ವರ್ಷದಿಂದಲೂ ಕುಡಿಯುವ ನೀರಿಗೆ ಮತ್ತು ಮೇವಿಗೆ ಬರ ಎದುರಾಗಿದ್ದು, ಈ ವರ್ಷವೂ ಮುಂದುವರಿದಿದೆ. ಕೃಷಿ ಚಟುವಟಿಕೆ ಮಾತ್ರ ಪರವಾಗಿಲ್ಲ ಎಂಬಂತಿದೆ. ಬರದ ಆತಂಕವೇನಿಲ್ಲ ಎಂದು ಅವರು ಮಂಗಳವಾರ `ಪ್ರಜಾವಾಣಿ~ಗೆ ತಿಳಿಸಿದರು.

2009ರಲ್ಲಿ ಬರಕ್ಕೆ ಈಡಾಗಿದ್ದ ಜಿಲ್ಲೆಯಲ್ಲಿ ಆಗ ಜುಲೈ ಅಂತ್ಯದ ಹೊತ್ತಿಗೆ 271.5 ಮಿ.ಮೀ ಮಳೆ ಮಾತ್ರ ಸುರಿದಿತ್ತು. 2011ರ ಜುಲೈ 24ರವರೆಗೂ ಸುರಿದ ಮಳೆ ಕೇವಲ 271.06 ಮಿ.ಮೀ ಮಾತ್ರ.  2010ರ ಜುಲೈನಲ್ಲಿ ಅಧಿಕ 489.3 ಮಿ.ಮೀ ಮಳೆ ಸುರಿದಿತ್ತು.

2009ರಲ್ಲಿ: ಜಿಲ್ಲೆಯಲ್ಲಿ ಸತತ 54 ದಿನ ಮಳೆಯೇ ಇಲ್ಲದೆ ಒಣಹವೆ ಹರಡಿದ್ದ ಪರಿಣಾಮ 2009ರಲ್ಲಿ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿತ್ತು. ಆ ವರ್ಷದ ಆ.24ರಂದು ಜಿಲ್ಲೆಯ ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಕೇಂದ್ರದಿಂದ ಅಧಿಕಾರಿಗಳ ತಂಡ ಬಂದಿತ್ತು. ಆಗ ಸರಾಸರಿ ಮಳೆಯೂ ಆಗಿರಲಿಲ್ಲ. ಶೇ 19 ರಷ್ಟು ಮಾತ್ರ ಬಿತ್ತನೆಯಾಗಿದ್ದ ಪ್ರದೇಶದ್ಲ್ಲಲೂ ಮಳೆ ಇಲ್ಲದೆ ಬೆಳೆ ಹಾಳಾಗಿತ್ತು. 2010ರಲ್ಲಿ ಅಂಥ ಸನ್ನಿವೇಶವಿರಲಿಲ್ಲ. ಸಾಕಷ್ಟು ಮಳೆ ಸುರಿದಿತ್ತು. ಬಿತ್ತನೆಯೂ ಸುಗಮವಾಗಿತ್ತು.

2011ರಲ್ಲಿ ಮತ್ತೆ ಜಿಲ್ಲೆಯನ್ನು ಬರ ಆವರಿಸಿತ್ತು. ಕಳೆದ ಡಿ.15ರಂದು  ಕೇಂದ್ರ ಕೃಷಿ ಸಚಿವಾಲಯದ ರಾಷ್ಟ್ರೀಯ ತೋಟಗಾರಿಕಾ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಿಜಯ್ ಕುಮಾರ್ ಹಾಗೂ ಕೇಂದ್ರ ಸರ್ಕಾರದ ತೋಟಗಾರಿಕೆ ಇಲಾಖೆ ಆಯುಕ್ತ ಡಾ. ಗೋರಖ್ ಸಿಂಗ್ ನೇತೃತ್ವದ ತಂಡ ಜಿಲ್ಲೆಗೆ ಭೇಟಿ ನೀಡಿತ್ತು.

ಕಳೆದ ಏಪ್ರಿಲ್ 10ರಂದು ಸಚಿವರಾದ ಸುರೇಶ್‌ಕುಮಾರ್, ರವೀಂದ್ರನಾಥ್, ಬಿ.ಎನ್.ಬಚ್ಚೇಗೌಡ ನೇತೃತ್ವದ ತಂಡ, 12ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, 21ರಂದು ಡಿ.ವಿ.ಸದಾನಂದ ಗೌಡ ಜಿಲ್ಲೆಗೆ ಭೇಟಿ ನೀಡಿದ್ದರು.ಈಗ ಕುಡಿಯುವ ನೀರಿನ ತೀರದ ಸಮಸ್ಯೆ ನಡುವೆಯೇ ಜಿಲ್ಲೆ ಕೃಷಿ ಚಟುವಟಿಕೆ ಮಳೆಗಾಗಿ ಕಾಯುತ್ತಲೇ ಸಾಗಿದೆ.

ಮುಖ್ಯಾಂಶಗಳು
* 32,734 ಹೆಕ್ಟೇರ್‌ನಲ್ಲಿ ಬಿತ್ತನೆ
* 300 ಮಿ.ಮೀ ಆಶಾದಾಯಕ ಮಳೆ
* ಮಾಸಾಂತ್ಯಕ್ಕೆ ಶೇ 80 ಬಿತ್ತನೆ ನಿರೀಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT