ಮುಳಬಾಗಲು: ತಾಲ್ಲೂಕಿನ ರಾಜೇಂದ್ರಹಳ್ಳಿಯ ನೀರಿಲ್ಲದ ಕೆರೆಯಲ್ಲಿ ರೈತರು ವಿವಿಧ ಬೆಳೆ ಬೆಳೆದಿದ್ದಾರೆ. ಕೃಷಿಯೇತರ ಉದ್ದೇಶಗಳಿಗೆ ಕೆರೆಗಳ ಒತ್ತುವರಿ ನಡೆಯುತ್ತಿರುವ ವೇಳೆಯಲ್ಲಿ ರೈತರು ಕೆರೆಯಂಗಳದಲ್ಲಿ ಕೃಷಿ ಚಟುವಟಿಕೆ ಕೈಗೊಂಡಿದ್ದಾರೆ.
ಕೆರೆಯಲ್ಲಿ ಸದ್ಯಕ್ಕೆ ನೀರಿಲ್ಲ. ಇದ್ದ ನೀರು ಈಗಾಗಲೇ ಗದ್ದೆಗಳಿಗೆ ಬಳಕೆಯಾಗಿದೆ. ಇಂಥ ಸನ್ನಿವೇಶದಲ್ಲಿ ಗ್ರಾಮದ ಸುತ್ತಮುತ್ತಲಿನ ರೈತರು ಸಾಸಿವೆ, ಹೂವು, ಕೊತ್ತಂಬರಿ ಸೊಪ್ಪು, ಮೆಂತ್ಯದ ಸೊಪ್ಪು, ಭತ್ತ, ತರಕಾರಿ ಹಾಗೂ ಇತರೆ ಅಲ್ಪಕಾಲಿಕ ಬೆಳೆ ಬೆಳೆದಿದ್ದಾರೆ. ಅತಿಕಡಿಮೆ ಬಂಡವಾಳದಲ್ಲಿ ಈ ಬೆಳೆ ಬೆಳೆಯಲಾಗಿದೆ. ಆಕಸ್ಮಿಕವಾಗಿ ಮಳೆ ಸುರಿದು ಕೆರೆ ತುಂಬಿದರೆ ಬಂಡವಾಳ ನೀರು ಪಾಲಾದೀತೆಂಬ ಅತಂಕವೂ ಇಲ್ಲ. ಅತಿ ಕಡಿಮೆ ಅವಧಿಯಲ್ಲಿ ಲಾಭದಾಯಕವಾದ ಬೆಳೆ ಬೆಳೆದಿರುವುದು ವಿಶೇಷ.
ಸಮಸ್ಯೆ: ಕೆರೆಯಂಗಳದ ಜಮೀನು ಒತ್ತುವರಿ ಮಾಡಿರುವ ರೈತರಿಗೆ ತಾತ್ಕಾಲಿಕವಾಗಿ ಅನುಕೂಲವಾಗಿದ್ದರೂ ಕೆರೆಯ ನೀರು ಸಂಗ್ರಹಣೆಗೆ ಅಡಚಣೆಯಾಗುತ್ತಿದೆ. ಈ ಕಟು ಸತ್ಯ ಗೊತ್ತಿದ್ದೂ ರೈತರು ಬೆಳೆ ಬೆಳೆಯುತ್ತಿದ್ದಾರೆ. ಕೆರೆ ಅಂಗಳ ಒತ್ತುವರಿ ಮಾಡುವುದು ಕಾನೂನು ಬಾಹಿರ. ಆದರೆ ಕೆರೆಯೊಳಗೆ ಬೆಳೆ ಬೆಳೆಯುವುದು ಕಾನೂನು ಬಾಹಿರವೆ ಎಂಬ ಕುರಿತು ಸ್ಪಷ್ಟತೆ ಇಲ್ಲ. ಸದ್ಯಕ್ಕೆ ಕೆರೆಯ ಫಲವತ್ತತೆಯನ್ನು ರೈತರು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅದು ಕೆರೆ ಒತ್ತುವರಿಯಾಗುವುದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
ಕೆರೆಯ ಒತ್ತುವರಿ ಅನಾಹುತವೇನೂ ಆಗುವುದಿಲ್ಲ. ನೀರಿರುವ ಕೆರೆಯಲ್ಲಿ ಏನೂ ಬೆಳೆಯಲಾಗದು, ಅದೇ ಖಾಲಿ ಕೆರೆಯಲ್ಲಿ ನೀರು ಬರುವವರೆಗೂ ಬೆಳೆ ಬೆಳೆಯಬಹುದು. ಅದು ತಮ್ಮ ಹಕ್ಕೆಂದು ರೈತರು ಪಹಣಿ ಪಟ್ಟ ಕೇಳುವ ಪ್ರಮೇಯವೂ ಇಲ್ಲ ಎನ್ನುತ್ತಾರೆ ಅವರು.