ಇಸ್ಲಾಮಾಬಾದ್, (ಪಿಟಿಐ): ಪಾಕಿಸ್ತಾನದಿಂದ ತಲೆಮರೆಸಿ ದುಬೈ ಮತ್ತು ಲಂಡನ್ನಲ್ಲಿ ಆಶ್ರಯ ಪಡೆದಿರುವ ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಸ್ವದೇಶಕ್ಕೆ ಮರಳುವುದಾಗಿ ತಿಳಿಸಿರುವ ಬೆನ್ನಲ್ಲಿಯೇ ಅವರನ್ನು ಹತ್ಯೆಗೈದವರಿಗೆ 10.10 ಕೋಟಿ ರೂಪಾಯಿ ಮೌಲ್ಯದ ಬಹುಮಾನ ನೀಡುವುದಾಗಿ ಬಲೂಚಿಸ್ತಾನದ ಮಾಜಿ ಮುಖಂಡ ದಿ.ಅಕ್ಬರ್ ಬಗ್ಟಿ ಅವರ ಮೊಮ್ಮಗ ಘೋಷಿಸಿದ್ದಾರೆ.
ಇದೇ 27ರಿಂದ 30ರ ಅವಧಿಯಲ್ಲಿ ಸ್ವದೇಶಕ್ಕೆ ಹಿಂತಿರುಗುವುದಾಗಿ ಪರ್ವೇಜ್ ಮುಷರಫ್ ಘೋಷಿಸಿದ್ದಾರೆ. `ಇವರನ್ನು ಹತ್ಯೆಗೈದವರಿಗೆ ಹತ್ತು ಲಕ್ಷ ರೂಪಾಯಿ ನಗದು ಹಾಗೂ ಹತ್ತು ಕೋಟಿ ರೂಪಾಯಿ ಮೌಲ್ಯದ ಬಂಗಲೆಯನ್ನು ನೀಡುವುದಲ್ಲದೆ ಪೂರ್ಣ ರಕ್ಷಣೆ ಒದಗಿಸಲಾಗುವುದು~ ಎಂದು ಶಹಜೇನ್ ಬಗ್ಟಿ ಸಿಂಧ್ ಪ್ರಾಂತ್ಯದಲ್ಲಿ ವರದಿಗಾರರಿಗೆ ತಿಳಿಸಿದರು.
2006ರಲ್ಲಿ ಬಲೂಚಿಸ್ತಾನದ ಕೊಹ್ಲು ಜಿಲ್ಲೆಯಲ್ಲಿ ಪರ್ವೇಜ್ ಮುಷರಫ್ ಆದೇಶದ ಮೇರೆಗೆ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಅಕ್ಬರ್ ಬಗ್ಟಿ ಮತ್ತು ಅವರ ಆಪ್ತರು ಹಲವರು ಹತರಾಗಿದ್ದರು.
`ಮುಷರಫ್ ಪಾಕ್ ಪ್ರವೇಶಿಸಿದ ತಕ್ಷಣ ಅವರನ್ನು ಸರ್ಕಾರ ಬಂಧಿಸದಿದ್ದಲ್ಲಿ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ~ ಎಂದು ಜಮ್ಹೂರಿ ವತನ್ ಪಕ್ಷದ ಹಿರಿಯ ನಾಯಕರಾದ ಶಹಜೇನ್ ಅಭಿಪ್ರಾಯಪಟ್ಟರು.
`ಇಸ್ಲಾಮಾಬಾದ್ನ ಲಾಲ್ ಮಸೀದಿ ಕಾರ್ಯಾಚರಣೆಯ ವೇಳೆ ನನ್ನ ಅಜ್ಜ ಸೇರಿದಂತೆ ನೂರಾರು ಮಂದಿಯ ಸಾವಿಗೆ ಮುಷರಫ್ ಕಾರಣರಾಗಿದ್ದು, ಅವರು ಹತ್ಯೆಗೆ ಯೋಗ್ಯರು ಎಂದು ಧಾರ್ಮಿಕ ಮುಖಂಡರುಗಳು ಘೋಷಿಸಿದ್ದಾರೆ~ ಎಂದು ಶಹಜೇನ್ ಅವರು ಹೇಳಿದರು.