ಇಸ್ಲಾಮಾಬಾದ್(ಪಿಟಿಐ): ದೇಶದ್ರೋಹದ ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ (೭೦) ಗುರುವಾರ ರಾವಲ್ಪಿಂಡಿಯ ವಿಶೇಷ ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ‘ತೀವ್ರ ಹೃದಯಾಘಾತ’ಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ ಘಟನೆ ನಡೆಯಿತು.
ತೋಟದ ಮನೆಯಿಂದ ಬೆಳಿಗ್ಗೆ ನ್ಯಾಯಾಲಯದತ್ತ ಹೊರಟ ಅವರ ಕಾರು ಏಕಾಏಕಿ ಆಸ್ಪತ್ರೆಯತ್ತ ಹೊರಳಿತು. ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ರಾವಲ್ಪಿಂಡಿಯ ಸೇನಾ ಆಸ್ಪತ್ರೆಗೆ ಸೇರಿಸಲಾಯಿತು.
ಹೀಗಾಗಿ ಮುಷರಫ್ ಸತತ 3ನೇ ಬಾರಿಗೂತಮ್ಮ ವಿರುದ್ಧದ ದೇಶದ್ರೋಹ ಆಪಾದನೆ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ.
ಇದಕ್ಕೂ ಮೊದಲು, ತಮ್ಮ ಕಕ್ಷಿದಾರರಿಗೆ ಸೋಮವಾರದವರೆಗೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗುವುದರಿಂದ ವಿನಾಯ್ತಿ ನೀಡುವಂತೆ ಅವರ ವಕೀಲರು ಮನವಿ ಮಾಡಿಕೊಂಡಿದ್ದರು. ಮನವಿ ತಳ್ಳಿ ಹಾಕಿದ ನ್ಯಾಯಾಲಯ, ಯಾವುದೇ ಕಾರಣಕ್ಕೂ ಗುರುವಾರ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಅವರು ತಪ್ಪಿಸಿಕೊಳ್ಳುವಂತೆ ಇಲ್ಲ ಎಂದು ಕಟ್ಟಪ್ಪಣೆ ಮಾಡಿತ್ತು.
2007ರಲ್ಲಿ ತುರ್ತು ಪರಿಸ್ಥಿತಿ ಹೇರಿ ನ್ಯಾಯಮೂರ್ತಿಗಳನ್ನು ಬಂಧಿಸಿದ್ದ ಪ್ರಕರಣದಲ್ಲಿ ದೇಶದ್ರೋಹ ಆಪಾದನೆ ಎದುರಿಸುತ್ತಿರುವ ಮುಷರಫ್, ಆರೋಪ ಸಾಬೀತಾದಲ್ಲಿ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆಗೆ ಒಳಗಾಗುವ ಸಾಧ್ಯತೆ ಇದೆ.
ಇದಕ್ಕೂ ಮೊದಲು ನಡೆದ ಮತ್ತೊಂದು ನಾಟಕೀಯ ಬೆಳವಣಿಗೆಯಲ್ಲಿ ಮುಷರಫ್ ಪರ ವಾದ ಮಂಡಿಸಬೇಕಿದ್ದ ವಕೀಲ ಅನ್ವರ್ ಮನ್ಸೂರ್, ರಾತ್ರಿ ತಮಗೆ ಸರಿಯಾಗಿ ನಿದ್ದೆಯಾಗಿಲ್ಲ ಎಂಬ ಕಾರಣ ನೀಡಿ ಹೊರ ನಡೆದರು.
ಬುಧವಾರ ರಾತ್ರಿಯಿಂದ ಬೆಳಗಿನ ಜಾವದವರೆಗೂ ಅಪರಿಚಿತರು ಮನೆ ಕರೆಗಂಟೆ ಒತ್ತಿ ತೊಂದರೆ ನೀಡಿದರು. ಇದರಿಂದ ಒತ್ತಡಕ್ಕೆ ಒಳಗಾಗಿದ್ದೇನೆ ಎಂದರು. ಈ ಕುರಿತು ಸೂಕ್ತ ತನಿಖೆ ನಡೆಸಲು ಆದೇಶಿಸುವುದಾಗಿ ನ್ಯಾಯಾಧೀಶರು ಭರವಸೆ ನೀಡಿದರೂ ಮನ್ಸೂರ್ ಹೊರ ನಡೆದರು.
ಮುಷರಫ್ ವಕೀಲರ ತಂಡದ ಮುಖ್ಯಸ್ಥ ಶರೀಫುದ್ದೀನ್ ಪೀರ್ಜಾದಾ ಅವರು, ಸರ್ಕಾರಿ ವಕೀಲರು ತಮಗೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.
ವಿದೇಶಕ್ಕೆ ಕರೆದೊಯ್ಯಲು ಚಿಂತನೆ
ಹೆಚ್ಚಿನ ಚಿಕಿತ್ಸೆಗಾಗಿ ಮುಷರಫ್ ಅವರನ್ನು ವಿದೇಶಕ್ಕೆ ಕರೆದೊಯ್ಯುವ ಬಗ್ಗೆ ಚಿಂತನೆ ನಡೆದಿದೆ ಎಂದು ಮುಷರಫ್ ಪಕ್ಷದ ವಕ್ತಾರ ಆಸಿಯಾ ಇಶಾಕ್ ತಿಳಿಸಿದ್ದಾರೆ.
ದೇಶಬಿಟ್ಟು ತೆರಳದಂತೆ ಮುಷರಫ್ ಅವರಿಗೆ ಪಾಕಿಸ್ತಾನ ಸರ್ಕಾರ ಈ ಮೊದಲೇ ನಿರ್ಬಂಧ ಹೇರಿದೆ. ಇದರಿಂದಾಗಿ ಸರ್ಕಾರದ ಅನುಮತಿ ಇಲ್ಲದೇ ಅವರು ದೇಶ ಬಿಟ್ಟು ತೆರಳುವಂತಿಲ್ಲ.
ದೃಢಪಡಿಸಿದ ವೈದ್ಯರು
ಮುಷರಫ್ ತಪಾಸಣೆ ನಡೆಸಿದ ವೈದ್ಯರು ಹೃದಯಾಘಾತವಾಗಿರುವುದನ್ನು ದೃಢಪಡಿಸಿದರು.
ಸದ್ಯ ಅವರನ್ನು ರಾವಲ್ಪಿಂಡಿಯ ಸೇನಾ ಆಸ್ಪತ್ರೆ ತುರ್ತು ನಿಗಾ ಘಟಕದಲ್ಲಿ (ಸಿಸಿಯು) ಇರಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.