ಶಿವಮೊಗ್ಗ: ಮುಸ್ಲಿಮರ ವಿರುದ್ಧ ಅಸಹನೆ ವ್ಯಕ್ತಪಡಿಸುವುದು ಕೆ.ಎಸ್. ಈಶ್ವರಪ್ಪ ಅವರಿಗೆ ಹಳೇ ಚಾಳಿ. ಈ ಚಾಳಿ ಬದಲಾಯಿಸಿಕೊಳ್ಳದಿದ್ದರೆ ಮತದಾರರೇ ಅವರಿಗೆ ಸೂಕ್ತ ಉತ್ತರ ನೀಡುತ್ತಾರೆ ಎಂದು ಮುಸ್ಲಿಂ ಧಾರ್ಮಿಕ ಮುಖಂಡರು ಎಚ್ಚರಿಕೆ ನೀಡಿದರು.
ಶಾಸಕ ಯಾವುದೇ ಒಂದು ಜಾತಿಗೆ ಸೀಮಿತ ಅಲ್ಲ. ಎಲ್ಲರನ್ನೂ ಸಮಾನರಾಗಿ ಕಾಣಬೇಕು. ಆದರೆ, ಈಶ್ವರಪ್ಪ ಅವರಿಗೆ ಮೊದಲಿನಿಂದಲೂ ಮುಸ್ಲಿಮರ ಬಗ್ಗೆ ಅಸಹನೆ ಇದೆ. ಯಾವುದೇ ಒಂದು ಸಮಾಜವನ್ನು ತಪ್ಪಿತಸ್ಥರೆಂದು ಬಿಂಬಿಸಬಾರದು. ಈಶ್ವರಪ್ಪ ತಮ್ಮ ನಿಲುವು ಬದಲಾಯಿಸಿಕೊಳ್ಳದಿದ್ದರೆ ಮುಸ್ಲಿಂ ಸಮಾಜ ಹೋರಾಟ ಕೈಗೊಳ್ಳುತ್ತದೆ ಎಂದು ಹಜರತ್ ಸಯದ್ ಷಾಹ ಆಲೀಮ ದಿವಾನ್ ದರ್ಗಾದ ಪ್ರಧಾನ ಕಾರ್ಯದರ್ಶಿ ಆಫ್ತಾಬ್ ಪರ್ವಿಜ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ತಲ್ಖೀನ್ ಅಹಮದ್ ಮಾತನಾಡಿ, ಈ ಬಗ್ಗೆ ಈಶ್ವರಪ್ಪ ಅವರೇ ಸ್ಪಷ್ಟನೆ ನೀಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸುನ್ನಿ ಜಾಮಿಯಾ ಮಸೀದಿ ಅಧ್ಯಕ್ಷ ಅನ್ಸರ್ ಪಾಷಾ, ಸುನ್ನಿ ಜಮಾತ್ ಉಲ್ಮಾ ಸಮಿತಿ ಅಧ್ಯಕ್ಷ ಸತ್ತಾರ್ ಬೇಗ್, ಹಜರತ್ ಸಯದ್ ಷಾಹ ಆಲೀಮ ದಿವಾನ್ ದರ್ಗಾದ ಅಧ್ಯಕ್ಷ ಟಿ. ಮೊಹಮದ್ ಗೌಸ್, ಹಜರತ್ ಸಯದ್ ಅಹಮದ್ ಷಾಹ ಅಲೈ ದರ್ಗಾದ ಅಧ್ಯಕ್ಷ ಮುನಾವರ್ ಪಾಷಾ ಉಪಸ್ಥಿತರಿದ್ದರು.