ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಸಂಜೆವರೆಗೂ ಮಾದೇಗೌಡ ಉಪವಾಸ

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮಂಡ್ಯ: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಗುರುವಾರ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಸೇರಿದಂತೆ ಐವರು ಬೆಳಿಗ್ಗೆಯಿಂದ ಸಂಜೆವರೆಗೆ ಉಪವಾಸ ಸತ್ಯಾಗ್ರಹ ನಡೆಸಿದರು.

ಹಿತರಕ್ಷಣಾ ಸಮಿತಿ ಉಪಾಧ್ಯಕ್ಷ ಎಂ.ಎಸ್.ಆತ್ಮಾನಂದ, ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.ರಾಜು, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಹಾಗೂ ನಗರಸಭೆ ಮಾಜಿ ಅಧ್ಯಕ್ಷೆ ಅಂಬುಜಮ್ಮ ಅವರು ಮಾದೇಗೌಡರೊಂದಿಗೆ ಬೆಳಿಗ್ಗೆ 10 ರಿಂದ ಸಂಜೆ 6ರವರೆಗೂ ಉಪವಾಸ ಮಾಡಿದರು.

ಪ್ರತಿ ಗಂಟೆಗೊಮ್ಮೆ ಜಿ.ಮಾದೇಗೌಡ ಅವರ ಆರೋಗ್ಯವನ್ನು `ಮಿಮ್ಸ~ ವೈದ್ಯರ ತಂಡವು ತಪಾಸಣೆ ನಡೆಸುತ್ತಿತ್ತು. ಮಧ್ಯಾಹ್ನ 2 ಗಂಟೆಗೆ ಅವರ ದೇಹದಲ್ಲಿ ಸಕ್ಕರೆ ಪ್ರಮಾಣದಲ್ಲಿ ಕಡಿಮೆಯಾಗಿದ್ದರಿಂದ ತಹಶೀಲ್ದಾರ್ ಡಾ.ಬಿ.ಕೆ.ಮಮತಾ ಅವರು ಉಪವಾಸ ಕೈ ಬಿಡುವಂತೆ ಮನವಿ ಮಾಡಿದರು. ಆರೋಗ್ಯದಲ್ಲಿ ಯಾವುದೇ ತೊಂದರೆಯಾಗಿಲ್ಲವೆಂದ ಗೌಡರು, ಉಪವಾಸ ಮುಂದುವರೆಸುವುದಾಗಿ ಹಟ ಹಿಡಿದರು. ಮಧ್ಯಾಹ್ನ 3.30ಕ್ಕೆ ತಪಾಸಣೆ ನಡೆಸಿದಾಗ ಸಕ್ಕರೆ ಪ್ರಮಾಣ ಮತ್ತಷ್ಟು ಕಡಿಮೆಯಾಗಿತ್ತು. ಆಗ ವೈದ್ಯರು, ಆಹಾರ ಸೇವಿಸದಿದ್ದರೆ ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ ಎಂದು ಸೂಚಿಸಿದರು. ತಹಶೀಲ್ದಾರ್ ಮಮತಾ ಅವರು, ಸಕ್ಕರೆ ಪ್ರಮಾಣ ಕಡಿಮೆಯಾಗಿರುವುದನ್ನು ವಿವರಿಸಿ, ಎಳನೀರು ಸೇವಿಸುವಂತೆ ಮನವಿ ಮಾಡಿದರು. ಅದಕ್ಕೆ ಅವರು ಒಪ್ಪಲಿಲ್ಲ. ಪದೇ ಪದೇ ಮನವಿ ಮಾಡಿಕೊಂಡಾಗ ಸ್ಪಂದಿಸಿದ ಅವರು ಎಳನೀರು ಸೇವಿಸಿದರು.

ಮನವಿಗೆ ಸ್ಪಂದನೆ: ಗುರುವಾರದಿಂದ ಆಮರಣಾಂತ ಉಪವಾಸ ಕುಳಿತುಕೊಳ್ಳುವುದಾಗಿ ಜಿ.ಮಾದೇಗೌಡರು ಘೋಷಿಸಿದ್ದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ಮಾದೇಗೌಡ ಅವರ ಬೆಂಬಲಿಗರು ಆಮರಣಾಂತ ಉಪವಾಸ ಕುಳಿತುಕೊಳ್ಳದಂತೆ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿ ಗುರುವಾರ ಸರದಿ ಉಪವಾಸ ಮಾಡಿದರು.

ಸಿದ್ದರಾಮಯ್ಯ, ಎಂ.ಸಿ.ನಾಣಯ್ಯ ಭಾಷಣಕ್ಕೆ ವಿರೋಧ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸದ ಎಚ್. ವಿಶ್ವನಾಥ, ಮಹದೇವಪ್ರಸಾದ್ ಸೇರಿದಂತೆ ಮೈಸೂರಿನ ಹಲವು ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.

ಪ್ರತಿಭಟನಾಕಾರನ್ನುದ್ದೇಶಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಲು ಮುಂದಾದಾಗ, ಪ್ರತಿಭಟನಾಕಾರರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಧರಣಿ ಆರಂಭಿಸಿದ 21 ದಿನಗಳ ನಂತರ ಬಂದಿದ್ದೀರಿ. ಕೆಆರ್‌ಎಸ್ ಮುತ್ತಿಗೆ ಕಾರ್ಯಕ್ರಮಕ್ಕೆ ಯಾಕೆ ಬಂದಿರಲಿಲ್ಲ. ರಾಜೀನಾಮೆ ಕೊಟ್ಟು ಹೋರಾಟಕ್ಕೆ ಬನ್ನಿ ಎಂದು ಆಗ್ರಹಿಸಿದರು.

ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಅವರು ಮನವಿ ಮಾಡಿಕೊಂಡ ನಂತರ ಎರಡು ನಿಮಿಷ ಮಾತನಾಡಲು ಅವಕಾ ಶಕೊಟ್ಟರು.

ಲಘು ಲಾಠಿ ಪ್ರಹಾರ: ಸಿದ್ದರಾಮಯ್ಯ ಅವರು ಭಾಷಣ ಮುಗಿಸಿ, ಹೊರಡಲು ಕೆಳಗೆ ಇಳಿಯುತ್ತಿದ್ದಂತೆಯೇ ಕೆಲ ಪ್ರತಿಭಟನಾಕಾರರು ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸಿದರು.

ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಎಂ.ಸಿ.ನಾಣಯ್ಯ ಅವರು ಬಂದಾಗಲೂ ಪ್ರತಿಭಟನಾಕಾರರು ಮಾತನಾಡಲು ಬಿಡಲಿಲ್ಲ. ಮೈಸೂರು-ಬೆಂಗಳೂರು ಹೆದ್ದಾರಿ ರಸ್ತೆ ತಡೆ ಶ್ರೀರಂಗಪಟ್ಟಣ, ಮಂಡ್ಯ, ಗೆಜ್ಜಲಗೆರೆ, ಮದ್ದೂರಿನಲ್ಲಿ ಗುರುವಾರ ಕೂಡಾ ಮುಂದುವರೆದಿತ್ತು. ಜಿಲ್ಲೆಯ ವಿವಿಧೆಡೆ ಸರಣಿಯಾಗಿ ಪ್ರತಿಭಟನೆಗಳು ಮುಂದುವರಿದಿವೆ.

ಕೆಆರ್‌ಎಸ್: ನಿಷೇಧಾಜ್ಞೆ ವಿಸ್ತರಣೆ
ಮಂಡ್ಯ: ಕೃಷ್ಣರಾಜ ಸಾಗರ ಜಲಾಶಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಜಾರಿಗೊಳಿಸಲಾಗಿದ್ದ ನಿಷೇಧಾಜ್ಞೆಯನ್ನು ಅ.11ರವರೆಗೆ ವಿಸ್ತರಿಸಿ  ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT