ಕುಂದಾಪುರ: ಖ್ಯಾತ ಗಾಯಕ ಕೆ.ಜೆ ಯೇಸುದಾಸ್ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದಲ್ಲಿ ಶುಕ್ರವಾರ ತಮ್ಮ 74ನೇ ಹುಟ್ಟುಹಬ್ಬ ಆಚರಿಸಿಕೊಂಡರು.
ಸಂಗೀತ ಕ್ಷೇತ್ರದಲ್ಲಿನ ತಮ್ಮ ಯಶಸ್ಸಿಗೆ ಮೂಕಾಂಬಿಕಾ ದೇವಿಯ ಆಶೀರ್ವಾದವೇ ಪ್ರೇರಣೆ ಎಂದು ಬಲವಾಗಿ ನಂಬಿರುವ ಅವರು ಹಲವು ವರ್ಷಗಳಿಂದ ಕೊಲ್ಲೂರಿನಲ್ಲಿ ವಿಶೇಷ ಪೂಜೆ ಸಲ್ಲಿಸುವ ಹಾಗೂ ಗಾಯನ ಸೇವೆಯನ್ನು ಅರ್ಪಿಸುವ ಮೂಲಕ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.
ಪತ್ನಿ ಪ್ರಭಾ ಯೇಸುದಾಸ್ ಅವರೊಂದಿಗೆ ಬಂದ ಯೇಸುದಾಸ್ ಅವರು, ದೇಗುಲದ ಅರ್ಚಕರಾದ ನಾರ್ಸಿ ಗೋವಿಂದ ಅಡಿಗ ಅವರ ಮಾರ್ಗದರ್ಶನದಲ್ಲಿ ಶ್ರೀದೇವಿಗೆ ಚಂಡಿಕಾ ಹೋಮ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ದೇಗುಲದ ಆವರಣದಲ್ಲಿ ನಿರ್ಮಿಸಲಾದ ವಿಶೇಷ ವೇದಿಕೆಯಲ್ಲಿ ಗಾಯನ ಸುಧೆ ಹರಿಸಿದರು.
ದೇಶದ ವಿವಿಧ ಭಾಗಗಳಿಂದ ಬಂದಿದ್ದ ಸಂಗೀತಾಸಕ್ತರ ಕಂದಮ್ಮಗಳಿಗೆ ಅಕ್ಷರಾಭ್ಯಾಸ ಮಾಡಿಸಿ ದೇಗುಲದ ಧಾರ್ಮಿಕ ಸೇವೆಯಲ್ಲಿಯೂ ಭಾಗಿಯಾದರು.
ಯೇಸುದಾಸ್ ಅವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಸನ್ಮಾನಿಸಿದರು.