ಶಿಗ್ಗಾವಿ: `ಮೂಡಲಪಾಯ ಯಕ್ಷಗಾನ ಭಾಗವತ ಕಲೆಯನ್ನು ಉಳಿಸಿ, ಬೆಳೆಸಿಕೊಳ್ಳಬೇಕಾದರೆ ಸರ್ಕಾರ, ಅಕಾಡೆಮಿಗಳು, ವಿದ್ವಾಂಸರು ಶ್ರಮಿಸುವುದು ಅವಶ್ಯವಾಗಿದೆ' ಎಂದು ವಿದ್ವಾನ್ ಕ.ನ. ದಾಸಾಚಾರ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ನಡೆದ ತಿಂಗಳ ಅತಿಥಿಯೊಂದಿಗೆ ಪಟ್ಟಾಂಗ-8 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
`ಮೂಡಲಪಾಯ ಯಕ್ಷಗಾನ ಕಲೆ ಯಕ್ಷಗಾನದ ಒಂದು ಪ್ರಬೇಧವಾಗಿದ್ದು, ಆಟದ ಕಥಾವಸ್ತು, ಗೀತೆ-ಸಂಭಾಷಣೆಗಳಲ್ಲಿನ ಪ್ರಾಸ, ಶ್ರಿಮಂತ ಸಾಹಿತ್ಯ ಮುಂತಾದ ಸಂಗತಿಗಳ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯಬೇಕು. ಸರ್ಕಾರ ಸಂಬಂಧಿಸಿದ ಅಕಾಡೆಮಿಗಳು ಹಾಗೂ ವಿದ್ವಾಂಸರು ಈ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲರಾದಾಗ ಮಾತ್ರ ಅಳಿದು ಹೋಗುತ್ತಿರುವ ಈ ಕಲೆಯನ್ನು ಉಳಿಸಿಕೊಳ್ಳಲು ಸಾಧ್ಯ' ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ, ಯಕ್ಷಗಾನಕ್ಕೆ ಸಿಕ್ಕಷ್ಟು ಮನ್ನಣೆ ಮೂಡಲಪಾಯ ಯಕ್ಷಗಾನ ಕಲೆಗೆ ಸಿಗದಿರುವುದು ವಿಪರ್ಯಾಸ ಸಂಗತಿಯಾಗಿದೆ. ಅಪರೂಪವಾದ ಮೂಡಲಪಾಯ ಯಕ್ಷಗಾನ ಕಲೆಯನ್ನು ಯಕ್ಷಗಾನದ ಮಟ್ಟಕ್ಕೆ ಎತ್ತರಿಸುವ ಮೂಲಕ ಮತ್ತು ಕಲಾವಿದರ ಪುನಶ್ಚೇತನಕ್ಕೆ ಜಾನಪದ ವಿಶ್ವವಿದ್ಯಾಲಯ ಶ್ರಮಿಸಲಿದೆ' ಎಂದು ತಿಳಿಸಿದರು.
ಜಾನಪದ ವಿಶ್ವವಿದ್ಯಾಲಯದ ಹಿರಿಯ ಸಂಶೋಧನಾಧಿಕಾರಿ ಡಾ.ಕೆ.ಪ್ರೇಮಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿದ್ವಾನ್ ಕ.ನ.ದಾಸಾಚಾರ್ ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು.
ವಿದ್ವಾನ್ ಕ.ನ.ದಾಸಾಚಾರ್ ತಂಡದ ಬಿ.ರಾಜಣ್ಣ, ಎಂ.ಎಚ್. ಬಸವಾಚಾರ್, ನಾಗರಾಜಾಚಾರ್, ಪುನೀತ್, ಸಿ.ಎನ್. ಬ್ರಹ್ಮರಸಾಚಾರ್, ಕಿರಣ್.ಎಸ್, ಎಂ.ಪಿ. ಲಕ್ಷ್ಮೀಕಾಂತ್, ಎಂ.ಆರ್. ಲವಕುಮಾರ್ ಅವರು ಮೂಡಲಪಾಯ ಯಕ್ಷಗಾನ ಕಲೆಯನ್ನು ಪ್ರದರ್ಶಿಸಿದರು.
ಮೌಲ್ಯಮಾಪನ ಕುಲಸಚಿವ ಪ್ರೊ.ಸ.ಚಿ. ರಮೇಶ ಸ್ವಾಗತಿಸಿದರು. ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಸಿ.ಎ. ಸೋಮಶೇಖರಪ್ಪ, ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಡಾ.ಕೆ.ಕಮಲಾಕ್ಷ, ಸಾಹಿತಿ ಡಾ. ಶ್ರಿಶೈಲ ಹುದ್ದಾರ, ಜಾನಪದ ಕಲಾವಿದರಾದ ಬಸವರಾಜ ಶಿಗ್ಗಾವಿ, ವೀರೇಶ ಬಡಿಗೇರ, ಹಜರೇಸಾಬ್ ನದಾಫ ಉಪಸ್ಥಿತರಿದ್ದರು.
ಎನ್. ಮೋಹನಕುಮಾರ ಪ್ರಾರ್ಥಿಸಿದರು. ಎಂ.ಬಿ.ಶ್ವೇತಾ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ವೃಷಭಕುಮಾರ ವಂದಿಸಿದರು.