ಮೂಡಿಗೆರೆ: ತಾಲ್ಲೂಕಿನ ಜೆಕ್ಕಲಿ, ಹೊರಟ್ಟಿ ಭಾಗಗಳಿಗೆ ದಾಳಿ ನಡೆಸಿರುವ ಕಾಡಾನೆಗಳು, ರೈತರು ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ, ಅಡಿಕೆ, ಏಲಕ್ಕಿ, ಬತ್ತದ ಬೆಳೆಗಳನ್ನು ನಾಶ ಮಾಡಿವೆ.
ಕೆಂಜಿಗೆ ಭಾಗದಿಂದ ಶನಿವಾರ ಬೆಳಗಿನ ಜಾವ ಮೂರು ಕಾಡಾನೆಗಳು ಜೆಕ್ಕಲಿ ಗ್ರಾಮದತ್ತ ಬಂದಿದ್ದು, ಬೆಳಿಗ್ಗೆ ಬತ್ತದ ಗದ್ದೆಗೆ ನೀರು ಕಟ್ಟಲು ಹೋದ ರೈತರೊಬ್ಬರನ್ನು ಓಡಿಸಿಕೊಂಡು ಬಂದಿವೆ. ತಪ್ಪಿಸಿಕೊಂಡ ರೈತ ಆನೆ ಬಂದಿರುವ ವಿಷಯ ತಿಳಿಸಿದ್ದಾರೆ. ಗ್ರಾಮಸ್ಥರೆಲ್ಲಾ ಸೇರಿ ಕೂಗಾಟ ನಡೆಸಿ ಆನೆ ಓಡಿಸಲು ಪ್ರಯತ್ನಿಸಿದರು ಎಂದು ಸ್ಥಳದಲ್ಲಿದ್ದ ರೈತರೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದರು.
ಕೆಂಜಿಗೆ ಮಾರ್ಗವಾಗಿ ಬರುವಾಗ ಸಿಗುವ ಹರೀಶ್ ಎಂಬ ರೈತರ ಕಾಫಿ ತೋಟಕ್ಕೆ ನುಗ್ಗಿದ ಆನೆಗಳು ಸುಮಾರು ಹದಿನೈದು ವರ್ಷಗಳಷ್ಟು ಹಳೆಯದಾದ ಅಡಿಕೆ, ಕಾಫಿ ಗಿಡಗಳನ್ನು ನೆಲಕ್ಕುರುಳಿಸಿ ತುಳಿದು, ಅಡಿಕೆ ಸುಳಿಯನ್ನು ತಿಂದು ಹೋಗಿವೆ.