ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಢನಂಬಿಕೆ ವಿರೋಧಿ ಕಾನೂನು: ಚಿಂತನೆ

‘ಪೆರಿಯಾರ್‌ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಸಚಿವ ಶ್ರೀನಿವಾಸ ಪ್ರಸಾದ್‌ ಹೇಳಿಕೆ
Last Updated 17 ಸೆಪ್ಟೆಂಬರ್ 2013, 19:49 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹಾರಾಷ್ಟ್ರ ಸರ್ಕಾರದ ಮಾದರಿಯಂತೆ ರಾಜ್ಯದಲ್ಲಿಯೂ ಮೂಢನಂಬಿಕೆ ವಿರೋಧಿ ಕಾನೂನು ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ’ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್‌ ಹೇಳಿದರು.

ವಿಚಾರವಾದಿಗಳ ವೇದಿಕೆ, ಕರ್ನಾಟಕ (ವಿವೇಕ) ಸಂಘಟನೆಯು ನಗರದ ಸೆಂಟ್ರಲ್‌ ಕಾಲೇಜು ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಪೆರಿಯಾರ್‌ ಇ.ವಿ.ರಾಮಸ್ವಾಮಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಎಂ.ವೆಂಕಟ ಸ್ವಾಮಿ ಅವರಿಗೆ ‘ಪೆರಿಯಾರ್‌ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತ ನಾಡಿದರು.

‘ಮಹಾರಾಷ್ಟ್ರದಲ್ಲಿ ನರೇಂದ್ರ ದಾಭೋಲಕರ್‌ ಅವರ ಹತ್ಯೆಯ ನಂತರ ಅಲ್ಲಿನ ಸರ್ಕಾರ ಮೂಢನಂಬಿಕೆಗಳನ್ನು ತೊಡೆದುಹಾಕಲು ಮೂಢನಂಬಿಕೆ ವಿರೋಧಿ ಕಾನೂನು ಜಾರಿಗೆ ತಂದಿದೆ. ಮಹಾರಾಷ್ಟ್ರದಲ್ಲಿ ರಚನೆಯಾದ ಈ ಕಾನೂನು ಮುಖ್ಯಮಂತ್ರಿಯವರ ಗಮನಕ್ಕೂ ಬಂದಿದೆ. ಆ ಕಾನೂನು  ಜಾರಿಗೆ ತರಲು ಚಿಂತನೆ ಕೂಡ ನಡೆದಿದೆ’ ಎಂದರು.

‘ಇಂದಿನ ಆಧುನಿಕ ಯುಗದಲ್ಲಿಯೂ ಸಂಪ್ರದಾಯ, ಮಡಿವಂತಿಕೆಯು ಯಥಾಸ್ಥಿತಿ ಯಲ್ಲಿಯೇ ಮುಂದು ವರೆದಿದೆ. ಸಂಪ್ರದಾಯವಾದಿ ಗಳು ಸಮಾಜವನ್ನು ತಮ್ಮ ಕಪಿಮುಷ್ಠಿ ಯಲ್ಲಿಟ್ಟುಕೊಂಡು ಸಮಾಜದ ಏಳಿಗೆ ಯನ್ನು  ತಡೆಯುತ್ತಿದ್ದಾರೆ’ ಎಂದರು.

‘ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿಗೆ ಗಾಳಿ ಮತ್ತು ಬೆಳಕು ಇವೆರಡನ್ನು ಬಿಟ್ಟು ಉಳಿದೆಲ್ಲವನ್ನೂ ನಿಯಂತ್ರಿಸಿದ್ದರು. ಆಗ ನಡೆಯುತ್ತಿದ್ದ ದೌರ್ಜನ್ಯ ಮತ್ತು ದಬ್ಬಾಳಿಕೆಗಳು ಇಂದಿಗೂ ನಡೆಯುತ್ತಿವೆ. ಆದರೆ. ಇಂದು ದೌರ್ಜನ್ಯದ ರೂಪಗಳು ಬದಲಾಗಿವೆ’ ಎಂದರು.

‘ಪೆರಿಯಾರ್‌ ಅವರು ವೈದಿಕ ಧರ್ಮದ ವಿರುದ್ಧ ದ್ರಾವಿಡಿಯನ್‌ ಚಳವಳಿ ಯನ್ನೇ ಆರಂಭಿಸಿದರು. ಅದು ದೇಶದಲ್ಲಿಯೇ ಹೊಸ ಕ್ರಾಂತಿಯ ಅಲೆಯನ್ನು ಎಬ್ಬಿಸಿತ್ತು. ಅವೈಜ್ಞಾನಿಕ ಮತ್ತು ಅವೈಚಾರಿಕತೆಯ ವಿರುದ್ಧದ ಅವರ ಹೋರಾಟ ಎಲ್ಲರಿಗೂ ಸ್ಫೂರ್ತಿದಾಯಕವಾದುದು. ಆದರೆ, ಅವರ ಹೋರಾಟದ ನಂತರವೂ ಇಂದಿಗೂ ದೇಶದಲ್ಲಿ ಮೂಢನಂಬಿಕೆ ಕಂದಾಚಾರಗಳು ಅವ್ಯಾಹತವಾಗಿ ಮುಂದುವರಿದಿವೆ’ ಎಂದರು.

ಲೇಖಕಿ ಬಿ.ಟಿ.ಲಲಿತಾ ನಾಯಕ್‌ ಮಾತನಾಡಿ, ‘ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಪೆರಿಯಾರ್‌ ಅವರ ತತ್ವಗಳಿಂದಲೇ ಕಲಿಯ ಬೇಕಾಗಿದೆ. ದೇಶದಲ್ಲಿ ಮೂಢನಂಬಿಕೆ ಕಂದಾಚಾರಗಳು ಆಕ್ಟೋಪಸ್‌ನಂತೆ ಬೆಳೆಯುತ್ತಿವೆ. ದೇವರು, ಧರ್ಮದ ಹೆಸರಿನಲ್ಲಿ  ಕೋಮುಗಲಭೆ ಗಳು ನಡೆಯುತ್ತಿವೆ. ದೇವರೇ ಇಲ್ಲ ಎಂದು ಪ್ರತಿಪಾದಿಸಿದ ಪೆರಿಯಾರ್‌ ಅವರ ಆದರ್ಶಗಳನ್ನು ಮನೆ–ಮನೆಯಲ್ಲಿ ಬಿತ್ತಬೇಕಾದ ಅಗತ್ಯವಿದೆ’ ಎಂದು ಹೇಳಿದರು.

‘12 ನೇ ಶತಮಾನದಲ್ಲಿ ಕಾಯಕವೇ ಪೂಜೆಯಾಗಿತ್ತು. ಆದರೆ, ಈಗ ಪೂಜೆಯೇ ಕಾಯಕವಾಗುತ್ತಿದೆ. ಇಂದು  ನಾವು ಸಂವಿಧಾನ ವನ್ನೇ ದೇವರಂತೆ ಪೂಜಿಸಬೇಕು’ ಎಂದರು.

ಢುಂಢಿ ಕೃತಿಯ ಲೇಖಕ ಯೋಗೇಶ್‌ ಮಾಸ್ಟರ್‌ ಮಾತನಾಡಿ, ‘ಜಯಮಾಲಾ ಅವರು ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದೇವಸ್ಥಾನ ದಲ್ಲಿ ಪೂಜೆ ಮಾಡಿದರೆಂದು ಅಲ್ಲಿಯ ದೇವಸ್ಥಾನದ ಪಾವಿತ್ರ್ಯ ಹಾಳಾಯಿತೆಂದು ಬೊಬ್ಬೆ ಹೊಡೆದರು. ಜಯಮಾಲಾ ಅವರ ಪ್ರವೇಶದಿಂದ ಅಯ್ಯಪ್ಪ ಸ್ವಾಮಿಯ ಪಾವಿತ್ರ್ಯತೆ ನಾಶಮಾಡಿದ ಜಯ ಮಾಲಾ ಅವರೇ ಶಕ್ತಿಯುತರು ಎಂದು ನಾವು ನಂಬಬೇಕಾ ಗುತ್ತದೆ. ಏಕೆಂದರೆ, ತನ್ನ ಪಾವಿತ್ರವನ್ನು ಕಾಪಾಡಿಕೊಳ್ಳ ದವನು ದೇವರಾಗಲು ಹೇಗೆ ಸಾಧ್ಯವಾಗುತ್ತದೆ’ ಎಂದು ಪ್ರಶ್ನಿಸಿದರು.

‘ಹಿಂದೂ ಧರ್ಮದ ಮೇಲೆಯೇ ಏಕೆ ಬರೆಯುತ್ತೀರಿ, ಮುಸ್ಲಿಂ, ಕ್ರಿಶ್ಚಿಯನ್‌ ಧರ್ಮಗಳ ಬಗ್ಗೆ ಬರೆಯಿರಿ ಎಂದು ಸಲಹೆ ನೀಡಿದರು. ಒಬ್ಬ ಲೇಖಕನ ಒಂದು ಕೃತಿಯು ಏನು ಮಾಡಲು ಸಾಧ್ಯ? ಹಾಗಾದರೆ, ಆ ಧರ್ಮ ಎಷ್ಟು ದುರ್ಬಲವಾಗಿದೆ ಎಂದು ಅರ್ಥವಾಗು ತ್ತದೆ’ ಎಂದರು.

ಮೋದಿ ಕಾಳಿಂಗ ಸರ್ಪ
‘ಯುಪಿಎ ಸರ್ಕಾರ ಚೇಳಿದ್ದಂತೆ. ಆದರೆ, ನರೇಂದ್ರ ಮೋದಿ ಕಾಳಿಂಗ ಸರ್ಪವಿದ್ದಂತೆ. ಕಾಳಿಂಗ ಸರ್ಪವು ತನ್ನ ಆಹಾರವನ್ನು ನುಂಗುವಂತೆ, ದೇಶದ ಆಡಳಿತ ಮೋದಿಗೆ ದೊರೆತರೆ ಇಡೀ ದೇಶವನ್ನೇ ನುಂಗಿಹಾಕುತ್ತಾರೆ’ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್‌ ಪ್ರಸಾದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT