ಇಳಕಲ್: ನಗರ ಸಭೆ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಆಶ್ರಯ ನಿವೇಶನ ಹಂಚಿಕೆ, ನೆರೆ ಸಂತ್ರಸ್ತರಿಗಾಗಿರುವ ಅನ್ಯಾಯದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಆಸರೆ ಮನೆಗಳ ವಿತರಣೆ, ವಿವಿಧ ಬಡಾವಣೆಗಳಲ್ಲಿನ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕು ಪತ್ರ ಹಂಚಿಕೆ ಮಾಡಬೇಕು ಮತ್ತು 2005ರಿಂದ ನಗರ ಸಭೆಗೆ ಬಿಡುಗಡೆ ಆಗಿರುವ ಎಲ್ಲಾ ಅನುದಾನಗಳ ಬಳಕೆಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆಗೆ ಆದೇಶ ಮಾಡಬೇಕು ಎಂದು ಆಗ್ರಹಿಸಿ ಇಲ್ಲಿನ ಜನ ಜಾಗೃತಿ ವೇದಿಕೆ, ತಾಲ್ಲೂಕು ಹೋರಾಟ ಸಮಿತಿ ಮತ್ತು ಅಖಿಲ ಭಾರತ ಭ್ರಷ್ಟಾಚಾರ ನಿರ್ಮೂಲನಾ ಸಮಿತಿಗಳು ಕೈಗೊಂಡಿರುವ ಅನಿರ್ದಿಷ್ಟ ಅವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ತಮಗೆ ಆಗಿರುವ ಅನ್ಯಾಯವನ್ನು ಸಂಬಂಧಪಟ್ಟ ಅಧಿಕಾರಿಗಳು ಸರಿ ಮಾಡದೆ ಇದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಸಂಬಂಧಪಟ್ಟ ಅಧಿಕಾರಿಗಳು ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿದರು.
ಬನ್ನಿಕಟ್ಟಿ ಸುತ್ತಮುತ್ತಲಿನ ಹಾಗೂ ವಿವಿಧ ಕೊಳಚೆ ಪ್ರದೇಶಗಳ 130 ಕ್ಕೂ ಹೆಚ್ಚು ಮಹಿಳೆಯರು ಇಂದು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ನಾಗರಾಜ ಹೊಂಗಲ್, ಬಿ.ಕೆ. ಸರಾಫ, ಮಹಾಂತೇಶ ಗೊರಜನಾಳ, ಪ್ರಲ್ಹಾದ ಪಾಟೀಲ, ಪ್ರದೀಪ ಭಂಡಾರಿ, ಮಾಯವ್ವ ಗಾಜಿ, ಯಲ್ಲಪ್ಪ ಪೂಜಾರ, ಪ್ರಹ್ಲಾದ ವೀರಾಪುರ ಸಿದ್ಧಪ್ಪ ತುಡುಬಿನಾಳ ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.