ಹುಮನಾಬಾದ್: ನಮ್ಮ ಮೂಲಧರ್ಮ ಹಾಗೂ ಸಂಸ್ಕೃತಿ ಸಂರಕ್ಷಣೆಯ ಕುರಿತು ಉತ್ತಮ ಸಂಸ್ಕಾರ ನೀಡುವುದೇ ವಿಶ್ವಹಿಂದೂ ಪರಿಷದ್ ಉದ್ದೇಶ ಎಂದು ವಿ.ಎಚ್.ಪಿ ಉತ್ತರ ಕರ್ನಾಟಕ ಪ್ರಾಂತ ಕಾರ್ಯಾಧ್ಯಕ್ಷ ಗೋವಿಂದ ನರೇಗಲ್ ತಿಳಿಸಿದರು. ಸ್ವಾಮಿ ವಿವೇಕಾನಂದರ 150ನೇ ಶತಾಬ್ದಿ ನಿಮಿತ್ತ ಇಲ್ಲಿನ ಲಕ್ಷ್ಮೀವೆಂಕಟೇಶ್ವರ ಬಾಲಭಾರತಿ ವಿದ್ಯಾಮಂದಿರದಲ್ಲಿ ಶಿಕ್ಷಕರಿಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ಒಂದು ದಿನದ ಅಭ್ಯಾಸ ವರ್ಗ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ವಿಶ್ವಹಿಂದೂ ಪರಿಷದ್ ಅಡಿಯಲ್ಲಿ ನಡೆಯುತ್ತಿರುವ ಎಲ್ಲ ಶಾಖೆಗಳಲ್ಲಿ ಇದನ್ನೇ ಕಲಿಸಲಾಗುತ್ತಿದೆ ಎಂದರು. ಪಾಶ್ಚಾತ್ಯ ಸಂಸ್ಕೃತಿ ಬಳಸದೇ ಸ್ವದೇಶಿ ಸಂಸ್ಕೃತಿ ಉಳಿಸಿ, ಬೆಳೆಸಿಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ ವಿಶ್ವಹಿಂದೂ ಪರಿಷದ್ ನಿರ್ವಹಿಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ, ವಿಶ್ವಹಿಂದೂ ಪರಿಷದ್ ಉತ್ತರ ಕರ್ನಾಟಕ ಪ್ರಾಂತ ಉಪಾಧ್ಯಕ್ಷ ಸುರೇಶ ಹೆರೂರ್ ದೇಶದ ಭವ್ಯ ಸಂಸ್ಕೃತಿ- ಸ್ವಾಮಿ ವಿವೇಕಾನಂದರು ಅಮೇರಿಕಾ ದೇಶಕ್ಕೆ ಪರಿಚಯಿಸುವ ಮಹತ್ವದ ಕಾರ್ಯ ಮಾಡಿದ್ದಾರೆ. ಅದೇ ಕಾರಣಕ್ಕೆ ಅಮೇರಿಕನ್ನರು ಈ ದೇಶದ ಸಂಸ್ಕೃತಿ ಮೆಚ್ಚಿದ್ದಾರೆ ಎಂದರು.
ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ, ಹಿರಿಯ ಉಪನ್ಯಾಸಕ ಗುರುನಾಥ ಹೂಗಾರ, ಸೇವಾ ಪ್ರಮುಖ ರಮೇಶ ಪರಾಂಡೆ, ಕಾರ್ಯದರ್ಶಿ ರಮೇಶ ಕಲಕರ್ಣಿ, ವಿಭಾಗ ಕಾರ್ಯದರ್ಶಿ ಲಕ್ಷ್ಮಣರಾವ ಪೊಲೀಸ್ ಪಾಟೀಲ, ಮಹಿಳಾ ಪ್ರಮುಖೆ ಕಲಾವತಿಬಾಯಿ ಜೋಷಿ ಮೊದಲಾದವರು ವೇದಿಕೆಯಲ್ಲಿ ಇದ್ದರು. ಅಭ್ಯಾಸ ವರ್ಗದಲ್ಲಿ ವಿಭಾಗದ ಒಟ್ಟು 86ಜನ ಶಿಕ್ಷಕರು ಭಾಗವಹಿಸಿದ್ದರು.
ಸದಾನಂದ ಖಮಿತ್ಕರ್ ಪ್ರಾರ್ಥಿಸಿದರು. ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಶಿವಶಂಕರ ತರನಳ್ಳಿ ಸ್ವಾಗತಿಸಿದರು. ಕಿಶೋರ ಕುಲಕರ್ಣಿ ನಿರೂಪಿಸಿದರು. ಶರಣಪ್ಪ ಹುಲಸೂರೆ ವಂದಿಸಿದರು.