ಗಜೇಂದ್ರಗಡ: ಸಮರ್ಪಕ ಮೂಲ ಸೌಕರ್ಯ ಪೂರೈಸಲು ಆಗ್ರಹಿಸಿ ಸಿಪಿಐ (ಎಂ) ನೇತೃತ್ವದಲ್ಲಿ ಗಜೇಂದ್ರಗಡ ನಾಗರಿಕರು ಗುರುವಾರ ಧರಣಿ ಸತ್ಯಾಗ್ರಹ ನಡೆಸಿದರು.
ನಗರದ ರಾಜವಾಡೆಯಿಂದ ಆರಂಭಗೊಂಡ ಪ್ರತಿಭಟನಾ ನಿರತ ಧರಣಿ ಮೆರವಣಿಗೆ ಹಿರೇಬಜಾರ, ದುರ್ಗಾ ವೃತ್ತ, ಶಿವಾಜಿ ವೃತ್ತ, ಜೋಡು ರಸ್ತೆ, ಕಾಲಕಾಲೇಶ್ವರ ವೃತ್ತ, ಕುಷ್ಟಗಿ ರಸ್ತೆ, ಭೋವಿ ಓಣಿ ಮೂಲಕ ಸಂಚರಿಸಿ ಸಾರ್ವಜನಿಕ ಗ್ರಂಥಾಲಯದ ಎದುರು ಧರಣಿ ಸತ್ಯಾಗ್ರಹ ಆರಂಭಿಸಿದರು.
‘ವಸತಿ ಹಾಗೂ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ವಸತಿ, ನಿವೇಶನಗಳಿಲ್ಲ. ಹೀಗಾಗಿ ಸರ್ಕಾರ ಹೇಳುವ ಗುಡಿಸಲು ಮುಕ್ತ ರಾಜ್ಯ ಮಾತ್ರ ಇಲ್ಲಿ ಬರೀ ಕನಸು. ಅನರ್ಹ ಫಲಾನುಭವಿಗಳನ್ನು ವಸತಿ, ಆಶ್ರಯ ಯೋಜನೆಗಳಡಿಯಲ್ಲಿ ಆಯ್ಕೆ ಮಾಡಿ ಸರ್ಕಾರಿ ಯೋಜನೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಹೀಗಾಗಿ ನೈಜ ಫಲಾನುಭವಿಗಳಿಗೆ ತಾಲ್ಲೂಕಿನಲ್ಲಿ ಸಮರ್ಪಕ ಸೂರಿಲ್ಲ’ ಎಂದು ಸಿಪಿಐ (ಎಂ) ಜಿಲ್ಲಾ ಘಟಕದ ಮುಖಂಡ ಎಂ.ಎಸ್.ಹಡಪದ ಸರ್ಕಾರದ ವಿರುದ್ಧ ಹರಿಹಾಯ್ದರು.
‘ಕಳೆದು ಐದು ತಿಂಗಳಲ್ಲಿ ಹಾಲಿ ಮತ್ತು ಮಾಜಿ ಶಾಸಕರು ತಾಲ್ಲೂಕಿನ ಎರಡು ಪುರಸಭೆ ಹಾಗೂ ಒಂದು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಮರ್ಪಕ ವಸತಿ, ನಿವೇಶನ ಯೋಜನೆ ಜಾರಿಗೊಳಿಸುವುದಾಗಿ ಹೇಳಿ ನಿವೇಶನ ಹಾಗೂ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಳ್ಳಲು ಆಯ್ಕೆಗೊಂಡ ಫಲಾನುಭವಿಗಳಿಗೆ ಕಾಮಗಾರಿ ಹಾಗೂ ಆದೇಶ ಮಂಜೂರಾತಿ ಹಕ್ಕು ಪತ್ರಗಳನ್ನು ನೀಡಿದ್ದಾರೆ.
ಹೀಗಿದ್ದರೂ ಆಯಾ ಪುರಸಭೆಗಳು ವಸತಿ ಹಾಗೂ ನಿವೇಶನಕ್ಕಾಗಿ ಕಾಯ್ದಿರಿಸಲಾದ ಜಮೀನನ್ನು ಲೇಔಟ್ಗಳನ್ನಾಗಿ ಪರಿವರ್ತಿಸಲು ಮುಂದಾಗಿಲ್ಲ. ಪರಿಣಾಮ ಬಡವರು ಹಾಗೂ ಹಿಂದುಳಿದ ವರ್ಗದ ಶ್ರಮಿಕರು ದುಬಾರಿ ಮೊತ್ತದ ಬಾಡಿಗೆ ನೀಡಿ ಜೀವಿಸಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ಮುಖಂಡ ಪೀರು ರಾಠೋಡ್ ಮಾತನಾಡಿ, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಹೀಗಿದ್ದರೂ ಸ್ಥಳೀಯ ಆಡಳಿತ ಸಮಸ್ಯೆ ನಿವಾರಣೆಗೆ ಕನಿಷ್ಠ ಕ್ರಮ ಕೈಗೊಂಡಿಲ್ಲ’ ಎಂದರು.
‘ಅಲ್ಲದೆ, ನಗರದ ಬಡ ಹಾಗೂ ಹಿಂದುಳಿದ ನಾಗರಿಕರು ವಾಸಿಸುವ ಬಡಾವಣೆಗಳಿಗೆ ರಸ್ತೆ, ಚರಂಡಿ, ಸಾರ್ವಜನಿಕ ನಲ್ಲಿ, ಬೀದಿ ವಿದ್ಯುತ್ ದ್ವೀಪಗಳಿಲ್ಲ. ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ’ ಎಂದು ಅವರು ದೂರಿದರು.
ನಗರದ ಬಡ ಹಾಗೂ ಹಿಂದುಳಿದ ಬಡಾವಣೆಗಳ ಸಾವಿರಾರು ನಾಗರಿಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.