ಕೃಷ್ಣರಾಜಪುರ: ಇಲ್ಲಿನ ಕೇಂದ್ರ ಬಿಎಂಟಿಸಿ ನಿಲ್ದಾಣದಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಶೌಚಾಲಯದ ಜತೆಗೆ, ಕುಡಿಯುವ ನೀರಿನ ಸಮಸ್ಯೆ ಕೂಡ ಪ್ರಯಾಣಿಕರನ್ನು ಕಾಡುತ್ತಿದೆ.
ಸ್ಥಳೀಯ ಕೇಂದ್ರ ಬಿಎಂಟಿಸಿ ನಿಲ್ದಾಣ ಮಾರ್ಗದಲ್ಲಿ ಸುಮಾರು 150ಕ್ಕೂ ಹೆಚ್ಚು ಬಸ್ಗಳು ಸಂಚರಿಸುತ್ತಿವೆ. ದಿನನಿತ್ಯ ಸುಮಾರು ಹತ್ತು ಸಾವಿರಕ್ಕೂ ಅಧಿಕ ಪ್ರಯಾಣಿಕರು ಬಿಎಂಟಿಸಿ ನಿಲ್ದಾಣದಿಂದ ಕೇಂದ್ರ ನಿಲ್ದಾಣದ ಕಡೆಗೆ ಸಂಚರಿಸುತ್ತಾರೆ. ಆದರೆ, ಇಲ್ಲಿನ ಬಸ್ ನಿಲ್ದಾಣದ ಆವರಣ ಕಿಷ್ಕಿಂಧೆಯಾಗಿರುವುದರ ಜತೆಗೆ ದುರಸ್ತಿ ಕೂಡ ಕಂಡಿಲ್ಲ.
ನಿಲ್ದಾಣದಲ್ಲಿ ಕೇವಲ 8-10 ಬಸ್ಸುಗಳನ್ನು ಮಾತ್ರ ನಿಲ್ಲಿಸಲು ಅವಕಾಶವಿದ್ದು, ಉಳಿದ ಬಸ್ಸುಗಳನ್ನು ರಸ್ತೆ ಬದಿಯ ಪ್ರಯಾಣಿಕರ ತಂಗುದಾಣ ಹಾಗೂ ಲೋಕೋ ಡೀಸೆಲ್ ಶೆಡ್ನ ಬಳಿ ನಿಲ್ಲಿಸಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಇನ್ನು, ಆವರಣದ ಒಂದು ಭಾಗದಲ್ಲಿ ಶೌಚಾಲಯ ನಿರ್ಮಾಣ ಅರ್ಧಕ್ಕೇ ನಿಂತಿದೆ.
`2004ರ ಜೂನ್ನಲ್ಲಿ ಶೌಚಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿತು. ಜುಲೈನಲ್ಲಿ ಕಾಮಗಾರಿ ಆರಂಭವಾಯಿತು. ಶೌಚಾಲಯದ ಮೇಲ್ಛಾವಣಿ ಹಂತ ತಲುಪುವ ಹೊತ್ತಿಗೆ ಕೆಲಸ ಸ್ಥಗಿತಗೊಂಡಿತು. ಎಂಟು ವರ್ಷಗಳಾದರೂ ಕಾಮಗಾರಿ ಅಪೂರ್ಣವಾಗಿಯೇ ಉಳಿದಿದೆ~ ಎಂದು ಕಾಲೋನಿ ನಿವಾಸಿ ಗೋಪಾಲಕೃಷ್ಣ ದೂರಿದರು.
ಬಿಬಿಎಂಪಿ ಚುನಾವಣೆಗೆ ಮುನ್ನ ಅಲ್ಲಲ್ಲಿ ನಾಲ್ಕೈದು ಬಿಎಂಟಿಸಿ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಕ್ಷೇತ್ರ ವಾಪ್ತಿಯಲ್ಲಿ ಅಂದಾಜು 45 ತಂಗುದಾಣಗಳ ಅವಶ್ಯಕತೆಯಿದೆ. ಆದರೂ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಅಗತ್ಯ ಸೌಲಭ್ಯ ಒದಗಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಕೃಷ್ಣಸ್ವಾಮಿ ಆರೋಪಿಸಿದ್ದಾರೆ.