ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯಕ್ಕೆ ಆಗ್ರಹ:ಮನವಿ

Last Updated 17 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಒಂದೂವರೆ ಲಕ್ಷ ಜನಸಂಖ್ಯೆ ಹೊಂದಿರುವ ದೊಡ್ಡಬಳ್ಳಾಪುರ ನಗರ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು,ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ ಸಂಚಾಲಕ ಡಿ.ಆರ್.ನಟರಾಜ್, ಎನ್.ಸಿ.ಲಕ್ಷ್ಮೀ ನೇತೃತ್ವದ ನಿಯೋಗ ಕೇಂದ್ರ ಕಾನೂನು ಸಚಿವ ಎಂ.ವೀರಪ್ಪಮೊಯಿಲಿ ಅವರಿಗೆ  ಮನವಿ ಸಲ್ಲಿಸಿತು.

ಬೆಂಗಳೂರಿನ ಸಚಿವರ ನಿವಾಸದಲ್ಲಿ ಭೇಟಿಯಾದ ನಿಯೋಗ, ಪಟ್ಟಣದಲ್ಲಿ ಕುಡಿಯಲು ನೀರಿಲ್ಲ, ಯೋಗ್ಯ ಆಸ್ಪತ್ರೆಗಳು, ವೃತ್ತಿಪರ ಕಾಲೇಜುಗಳು, ಯೋಗ್ಯ ರಸ್ತೆಗಳಿಲ್ಲ. ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲ.ನಗರದಿಂದ 2 ಕಿ.ಮೀ ದೂರದಲ್ಲಿರುವ ಅಪರೆಲ್‌ಪಾರ್ಕಿಗೆ ಕಾವೇರಿ ನೀರು ಒದಗಿಸಲಾಗುತ್ತಿದೆ. ಈ ನೀರನ್ನು ನಗರಕ್ಕೂ ಒದಗಿಸುವ ಕೆಲಸವಾಗಬೇಕು ಎಂದು ವಿವರಿಸಿದ್ದಾರೆ.

 ಒಂದು ಬಿಂದಿಗೆ ನೀರಿಗೆ 2 ರೂ ಕೊಟ್ಟು ಜನರು ಖರೀದಿಸುತ್ತಿದ್ದಾರೆ.ಕುಟುಂಬವೊಂದು ನೀರಿಗಾಗಿ ತಿಂಗಳಿಗೆ 200 ರೂ ಖರ್ಚು ಮಾಡಬೇಕಾಗಿದೆ. ಜಕ್ಕಲು ಮಡಗು ಯೋಜನೆ ಕಾಮಗಾರಿ ಪೂರ್ಣವಾಗಿಲ್ಲ.ಚಿಕ್ಕಬಳ್ಳಾಪುರ ನಾಗರೀಕರಿಗೆ ಕುಡಿಯುವ ನೀರು ಪೂರೈಕೆಗೆ ಜಕ್ಕಲು ಮಡಗು ಯೋಜನೆಯ ನೀರು ಸಾಕಾಗುತ್ತಿಲ್ಲ.ಹೀಗಿರುವಾಗ ದೊಡ್ಡಬಳ್ಳಾಪುರಕ್ಕೆ ಅದೇ ಯೋಜನೆ ವಿಸ್ತರಣೆ ಅಸಾಧ್ಯ.

ಆದರೆ ದೂರದೃಷ್ಟಿ ಇಲ್ಲದೆ ಇಲ್ಲಿನ ಶಾಸಕರು ಇದನ್ನು ಏಕೆ ಒಪ್ಪಿಕೊಂಡರೋ ಗೊತ್ತಿಲ್ಲ.ಇದರಿಂದ ನಮಗೆ ನೀರು ಬರುವ ಖಾತ್ರಿ ಇಲ್ಲದಾಗಿದೆ.ಪಟ್ಟಣದ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು.ಇದರ ಸುಗಮ ನಿರ್ವಹಣೆಗೆ ಶಾಶ್ವತವಾಗಿ ನಿಗಾ ಇಡಬೇಕು.ಅರ್ಕಾವತಿ ಮರುಚೇತನಕ್ಕೆ ಶೀಘ್ರವೇ ಚಾಲನೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಸುಸಜ್ಜಿತ ಬಸ್ ನಿಲ್ದಾಣ, ಸುಗಮ ಸಂಚಾರಿ ವ್ಯವಸ್ಥೆ ಆಗಬೇಕು.ನೇಕಾರರಿಗೆ ಶೇ.3 ಬಡ್ಡಿದರದಲ್ಲಿ ಸಾಲ ಎಂದು ಸರ್ಕಾರ ಘೋಷಿಸಿದೆ.ಆದರೆ ಇಲ್ಲಿನ  ಬ್ಯಾಂಕುಗಳು ಇದನ್ನು ಪಾಲನೆ ಮಾಡಿಲ್ಲ.ವೃದ್ಧಾಪ್ಯವೇತನ, ವಿಧವಾವೇತನ, ಅಂಗವಿಕಲರ ವೇತನಗಳ ಬಟವಾಡೆ ಪ್ರತಿ ತಿಂಗಳು ಜನರ ಕೈಸೇರುತ್ತಿಲ್ಲ.ಈ ಬಗ್ಗೆ ಕ್ರಮ ಕೈಗೊಳ್ಳಬೇಕು.ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ಒದಗಿಸುವಂತೆ ವಿನಂತಿಸಿದ್ದಾರೆ.

25 ಎಕರೆ ವಿಸ್ತೀರ್ಣದಷ್ಟು ನಾಗರಕೆರೆ ಒತ್ತುವರಿಯಾಗಿದೆ. ಈ ಕುರಿತು ಹತ್ತಾರು ವರ್ಷಗಳ ಹೋರಾಟ ಫಲಕೊಟ್ಟಿಲ್ಲ.ಒತ್ತುವರಿ ತೆರವಿಗೆ ಕ್ರಮ ಮತ್ತು ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಬೇಕು.ಮಾನವ ಹಕ್ಕುಗಳ ಆಯೋಗದ ತಾಲ್ಲೂಕು ಘಟಕ, ಮಹಿಳಾ ಪೋಲಿಸ್ ಠಾಣೆ, ಪಾಲಿಟೆಕ್ನಿಕ್, ಮಹಿಳಾ ಪದವಿ ಪೂರ್ವ ಕಾಲೇಜು ಪ್ರಾರಂಭಿಸುವಂತೆ, ನಗರದ ಪ್ರಮುಖ ರಸ್ತೆಗಳ ವಿಸ್ತರಣೆ, ಶವಸಂಸ್ಕಾರಕ್ಕಾಗಿ ವಿದ್ಯುತ್ ಚಿತಾಗಾರ ನಿರ್ಮಾಣ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಟ್ಟಣಕ್ಕೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ ಸದಸ್ಯರಾದ ಪದ್ಮನಾಭ್ ನಾಯಕ್,ಆರ್.ಚಂದ್ರ ತೇಜಸ್ವಿ, ಪ್ರಮೀಳಾ ಮಹದೇವ್, ಬಿ.ಜಿ.ಹೇಮಂತ್‌ರಾಜ್, ಎಸ್.ನಟರಾಜ್,ಜಿ.ಸಿ.ಶಿವಕುಮಾರ್,ಕೆ.ವೆಂಕಟೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT