ಶಹಾಪುರ: ಅಕ್ರಮ ಮರಳು ಸಾಗಾಟಕ್ಕೆ ಸಹಕಾರ ಹಾಗೂ ಖೊಟ್ಟಿ ರಾಯಲ್ಟಿ ಪ್ರಮಾಣ ಪತ್ರ ನೀಡಿದ ಆರೋಪದ ಮೇಲೆ ಲೋಕೋಪಯೋಗಿ ಇಲಾಖೆಯ ಮೂವರು ಎಂಜಿನಿಯರ್ ಹಾಗೂ 20 ಲಾರಿ ಚಾಲಕರ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (ಪ್ರಥಮ ವರ್ತಮಾನ ವರದಿ) ದಾಖಲಿಸಲಾಗಿದೆ.
ಫಿರ್ಯಾದಿದಾರ ಹಿರಿಯ ಭೂ ವಿಜ್ಞಾನಿಗಳು ಗಣಿ ಮತ್ತು ಭೂ ಇಲಾಖೆ ಅಧಿಕಾರಿ ಎನ್.ಎಸ್. ಮುಕುಂದಪ್ಪನವರ್ ಸೋಮವಾರ ತಡರಾತ್ರಿ ಠಾಣೆಗೆ ಹಾಜರಾಗಿ ಲೋಕೋಪಯೋಗಿ ಇಲಾಖೆಯ ಆರೋಪಿ ಸಹಾಯಕ ಎಂಜಿನಿಯರ್ ವಿಶ್ವನಾಥರಡ್ಡಿ, ವಾರದ ನಾಗಭೂಷಣ ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯಕುಮಾರ ಚುತರೆ ಹಾಗೂ 20 ಲಾರಿ ಚಾಲಕರ ವಿರುದ್ಧ ದಾಖಲಿಸಿದ್ದಾರೆ.
ತಾಲ್ಲೂಕಿನ ಹೈಯ್ಯಾಳ, ಯಕ್ಷಿಂತಿ, ಗೌಡೂರ ಗ್ರಾಮದ ನದಿ ಪಾತ್ರದಲ್ಲಿನ ಮರಳ (ಉಸುಕು)ನ್ನು ಸಾರ್ವಜನಿಕ ಕಟ್ಟಡ ಕಾಮಗಾರಿ ಮತ್ತು ಇತರ ಕೆಲಸಗಳಿಗಾಗಿ ಕಾರ್ಯನಿರ್ವಹಿಸುವ ವಿತರಿಸುವ ಸಲುವಾಗಿ ಎಇಇ ಪರವಾನಗೆ ನೀಡಲಾಗಿತ್ತು. ಆದರೆ ಸಹಾಯಕ ಎಂಜಿನಿಯರ್ ಖೊಟ್ಟಿ ದಾಖಲೆಯ ಪರವಾನಿಗೆ ಪ್ರಮಾಣ ಪತ್ರ ನೀಡಿ ಅಕ್ರಮವಾಗಿ ಮರಳು ಸಾಗಾಟಕ್ಕೆ ಹಾಗೂ ಕಳ್ಳತನಕ್ಕೆ ಅವಕಾಶ ನೀಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರೆದಿದೆ.