ಕೊಳ್ಳೇಗಾಲ: ಮಹದೇಶ್ವರಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಪೂಜೆ ಮುಗಿಸಿ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದ ಟೆಂಪೊಗೆ ಎದುರಿನಿಂದ ಬಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಭಕ್ತರು ಮೃತಪಟ್ಟಿದ್ದು, 19 ಮಂದಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಎಲ್ಲೇಮಾಳದ ಬಳಿ ಗುರುವಾರ ನಡೆದಿದೆ.
ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಬೆಟ್ಟದ ಹೊಸೂರಿನ ರಾಜೇಶ್ (22), ಮಹೇಶ್ (28 ) ಮತ್ತು ಮಾದೇಶ್ (24 ) ಮೃತಪ ಟ್ಟರು. ತೀವ್ರವಾಗಿ ಗಾಯಗೊಂಡಿರುವ ಬಸವರಾಜು, ಮರಿಸ್ವಾಮಿ, ಶಾಂತರಾಜು ರಾಜೇಶ್, ಕೆಎಸ್ಆರ್ಟಿಸಿ ಬಸ್ ಚಾಲಕ ಮಂಜುನಾಥ್ ಹಾಗೂ ಯೋಗೇಶ್ ಅವರನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆ ಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸೇರಿಸಲಾಗಿದೆ.
ಮಹದೇವಸ್ವಾಮಿ ಸಿದ್ದರಾಜು, ಸತೀಶ್, ಲಿಂಗರಾಜು, ಪ್ರಭುಸ್ವಾಮಿ ಸಿದ್ದರಾಜು, ರಾಜೇಶ್, ಲಿಂಗರಾಜು, ಬಸವಣ್ಣ, ಸುರೇಶ್, ಮಲ್ಲೇಶಪ್ಪ, ಮಹೇಶ್ ಹಾಗೂ ಶ್ರೀಕಂಠ ಅವರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ವಿವರ: ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ನಿಲಸೋಗೆ ಶಂಕರಪ್ಪ ತಮ್ಮ ಟೆಂಪೊಗೆ ಮಹದೇಶ್ವರ ಬೆಟ್ಟದಲ್ಲಿ ಪೂಜೆ ಮಾಡಿಸಲು ಬುಧವಾರ ಸಂಜೆ ಹೊರಟಿದ್ದರು.
ಈ ವಿಚಾರ ತಿಳಿದ ಬೆಟ್ಟದ ಹೊಸೂರು ಹಾಗೂ ನಿಲಸೋಗೆ ರೈತರು ತಾವೂ ಸಹ ಬೆಟ್ಟಕ್ಕೆ ಬರುವುದಾಗಿ ಹೇಳಿ ಟೆಂಪೊ ದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದರು. ಗುರುವಾರ ಬೆಳಿಗ್ಗೆ ಪೂಜೆ ಸಲ್ಲಿಸಿ ಮಧ್ಯಾಹ್ನ ಬೆಟ್ಟದಿಂದ ತಮ್ಮ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದಾಗ ಎಲ್ಲೇಮಾಳದ ಬಳಿ ಕೊಳ್ಳೇಗಾಲದ ಕಡೆಯಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಟೆಂಪೊಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಮಹೇಶ್ ಮತ್ತು ಮಾದೇಶ್ ಸ್ಥಳದಲ್ಲೇ ಮೃತಪಟ್ಟರೆ, ರಾಜೇಶ್ ಕೊಳ್ಳೇಗಾಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಗಾಯಗೊಂಡಿರುವವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ.
ಗಾಯಾಳುಗಳನ್ನು ಪೊಲೀಸ್ ವಾಹನಗಳಲ್ಲೇ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ಸಾಗಿಸ ಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.