ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಗವಧೆ ಮಲ್ಲಿಕಾರ್ಜುನ

Last Updated 20 ಜುಲೈ 2011, 19:30 IST
ಅಕ್ಷರ ಗಾತ್ರ

ವನವಾಸ ಸಂದರ್ಭದಲ್ಲಿ ಶ್ರೀ ರಾಮ ಸೀತೆಯ ಕೋರಿಕೆಯಂತೆ ಚಿನ್ನದ ಜಿಂಕೆಯನ್ನು ತಂದು ಕೊಡಲು ಬೆನ್ನಟ್ಟಿಕೊಂಡು ಹೋದ ಕಥೆ ಅನೇಕರಿಗೆ ಗೊತ್ತಿದೆ. ಜಿಂಕೆ ರೂಪದಲ್ಲಿ ಬಂದಿದ್ದ ಮಾರೀಚ ರಾಮನ ಬಾಣಕ್ಕೆ ಹತನಾಗುತ್ತಾನೆ.

ಈ ಸನ್ನಿವೇಶ ರಾಮಾಯಣದಲ್ಲಿ ಅತಿ ಪ್ರಮುಖ ತಿರುವನ್ನು ನೀಡುವ ಘಟನೆ. ಆದರೆ ಈ ಘಟನೆ ನಡೆದಿದೆ ಎನ್ನಲಾದ ಸ್ಥಳ ಬಹುತೇಕರಿಗೆ ಪರಿಚಯವಿಲ್ಲ. ಅದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೃಗವಧೆ.

ರಾಮ ಮಾರೀಚನನ್ನು ಹತ್ಯೆ ಮಾಡಿದ ಈ ಸ್ಥಳಕ್ಕೆ ಮಾರೀಚ ಮೃಗವಧಾ ಕ್ಷೇತ್ರ ಎಂಬ ಹೆಸರು ಬಂತು ಎಂಬ ಐತಿಹ್ಯವಿದೆ. ಬ್ರಹ್ಮ ಹತ್ಯೆಯ ಕಳಂಕದಿಂದ ಪಾರಾಗಲು ರಾಮ ಮಾರೀಚನ ದೇಹದಲ್ಲಿದ್ದ ಬಾಣಲಿಂಗವನ್ನು ಅಲ್ಲಿ ಹರಿಯುತ್ತಿದ್ದ ಬ್ರಾಹ್ಮಿ ನದಿ ತೀರದ ಮೇಲೆ ಪ್ರತಿಷ್ಠಾಪಿಸಿದ.
 
ಮಲಹಾನಿಕರೇಶ್ವರ ಎಂಬ ಮೂಲ ಹೆಸರಿನ ಈ ಲಿಂಗವಿರುವ ದೇವಸ್ಥಾನ ಇಂದು ಮಲ್ಲಿಕಾರ್ಜುನ ದೇವಸ್ಥಾನವೆಂದು ಪ್ರಸಿದ್ಧಿ ಪಡೆದಿದೆ. ನಾಲ್ಕೂವರೆ ಅಡಿ ಎತ್ತರದ ಬೃಹತ್ ಆಗಮ ಲಿಂಗ ಇಲ್ಲಿನ ವೈಶಿಷ್ಟ್ಯ.

ಚಾಲುಕ್ಯರ ಕಾಲದ ಶಿಲ್ಪಕಲೆಯನ್ನು ಒಳಗೊಂಡಿರುವ ಈ ದೇವಸ್ಥಾನವನ್ನು ಚಾಲುಕ್ಯ ಅರಸ ತ್ರಿಭುವನಮಲ್ಲ 1060ರಲ್ಲಿ ನಿರ್ಮಿಸಿದನು. ಕಾಲಾನಂತರ ಅವಸಾನದ ಹಂತದಲ್ಲಿದ್ದ ದೇವಾಲಯವನ್ನು ಕೆಳದಿ ಸೋಮಶೇಖರ ನಾಯಕನ ಕಾಲದಲ್ಲಿ ಪುನರುತ್ಥಾನ ಮಾಡಲಾಯಿತು.

ಈ ಗ್ರಾಮದ ಕೆಲವು ಭಾಗಗಳಲ್ಲಿ ಅರಮನೆ ಅಥವಾ ಅಗ್ರಹಾರಗಳಿತ್ತು ಎನ್ನುವುದಕ್ಕೆ ಕುರುಹುಗಳಿವೆ. ಹಳೆಯ ಕಾಲದ ನಿವೇಶನ, ಬಂಡೆ ಮೇಲಿನ ಅಪರೂಪದ ರೇಖಾಚಿತ್ರಗಳು, ಇಟ್ಟಿಗೆಗಳು ದೊರೆತಿದ್ದರೂ, ಸೂಕ್ತ ಸಂಶೋಧನೆ ನಡೆಯದ ಕಾರಣ ಇಲ್ಲಿನ ಇತಿಹಾಸ ಇನ್ನೂ ಬೆಳಕಿಗೆ ಬಂದಿಲ್ಲ.

ಮಲ್ಲಿಕಾರ್ಜುನ ದೇವಸ್ಥಾನದ ಸುತ್ತಲೂ ಪಂಜುರ್ಲಿ ಧೂಮಾವತಿ, ಪದ್ಮಾವತಿ, ಕ್ಷೇತ್ರಪಾಲ ಸೇರಿದಂತೆ ಈಶ್ವರನ ಸಮಸ್ತ ಗಣಗಳೂ ನೆಲೆಸಿವೆ ಎನ್ನಲಾಗಿದೆ. ಪ್ರತಿ ವರ್ಷ ಫಾಲ್ಗುಣ ಬಹುಳದಂದು ಐದು ದಿನ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ನಡೆಯುತ್ತದೆ.
 
ಒಂದು ಕಾಲದಲ್ಲಿ ಮಲ್ಲಿಕಾರ್ಜುನ ಸ್ವಾಮಿಯ ಪೂಜೆ ಅತಿ ವೈಭವದಿಂದ ನಡೆಯುತ್ತಿತ್ತು. ಹಲವು ವಿಶಿಷ್ಟ ಆಚರಣೆಗಳನ್ನೂ ಆಚರಿಸಲಾಗುತ್ತಿತ್ತು. ನಿತ್ಯಬಲಿ, ತ್ರಿಕಾಲ ಪೂಜೆ, ಆಗಮೋಕ್ತಿ, ಹಗಲು ದೀವಟಿಗೆ, ಕಾರ್ತಿಕ ದೀಪೋತ್ಸವ, ಅಷ್ಟಾವಧಾನ ಸೇವೆಗಳು ಇಲ್ಲಿನ ಪ್ರಮುಖ ಸೇವೆಗಳಾಗಿವೆ.

ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಮೂರು ಸಮಯಗಳಲ್ಲಿ ಇಲ್ಲಿ ಪೂಜೆ ನಡೆಯುತ್ತದೆ.
ಶನೀಶ್ವರ, ಶಂಕರೇಶ್ವರ, ಉಗ್ರ ನರಸಿಂಹ ಮತ್ತು ಆಂಜನೇಯ ದೇವರುಗಳ ಚಿಕ್ಕ ದೇವಾಲಯಗಳೂ ಇಲ್ಲಿವೆ.

ಪಾರ್ವತಿ ತನ್ನ ಮೇಲಿನ ಅಪವಾದವನ್ನು ಕಳೆದುಕೊಳ್ಳಲು ಮತ್ತು ಶನಿ ದೇವನ ಪ್ರಭಾವಕ್ಕೆ ಒಳಗಾಗಿ ತನ್ನ ಲಯದ ಕಾರ್ಯವನ್ನೇ ಮರೆತು ಅಡ್ಡಾಡುತ್ತಿದ್ದ ಈಶ್ವರನಿಗೆ ಮುಕ್ತಿ ನೀಡಲು ಅಗ್ನಿಪ್ರವೇಶ ಮಾಡಲು ಮುಂದಾದ ಸ್ಥಳ ಇದು ಎಂಬ ಪ್ರತೀತಿ ಇದೆ. ಹೀಗಾಗಿ ಇಲ್ಲಿನ ಶನೀಶ್ವರ ದೇವಾಲಯ ಕೂಡ ಸಾಕಷ್ಟು ಪ್ರಸಿದ್ಧಿ ಪಡೆದಿದೆ.

ಶ್ರಾವಣ ಮಾಸದ ಶನಿವಾರದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಮೃಗವಧೆ ಪುಟ್ಟ ಹಳ್ಳಿಯಾದರೂ ಇಲ್ಲಿಗೆ ಆಗಮಿಸುವ ಭಕ್ತರಿಗೆ ನಿತ್ಯವೂ ಭಕ್ತರು ನೀಡುವ ದೇಣಿಗೆಯಿಂದ ಮಧ್ಯಾಹ್ನ ಅನ್ನದಾನ ನಡೆಸಲಾಗುತ್ತಿದೆ. ಈ ಕ್ಷೇತ್ರಕ್ಕೆ ತೀರ್ಥಹಳ್ಳಿ ಮತ್ತು ಕೊಪ್ಪಗಳಿಂದ ಬರಲು ಬಸ್ ಸೌಕರ್ಯವಿದೆ.
.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT