ಬೆಂಗಳೂರು (ಪಿಟಿಐ): ತಮ್ಮ ಸಂಪುಟ ಸಹೋದ್ಯೋಗಿ ಸಿ.ಪಿ ಯೋಗೇಶ್ವರ ಅವರು ಅಭಿವೃದ್ಧಿಪಡಿಸಿದ ಮೆಗಾಸಿಟಿ ಯೋಜನೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಬಗ್ಗೆ ಮಾಹಿತಿ ಕೇಳಿ ಕೇಂದ್ರ ಕಾರ್ಪೊರೆಟ್ ವ್ಯವಹಾರಗಳ ಸಚಿವಾಲಯ ಸೇರಿದಂತೆ ಯಾರು ತಮ್ಮನ್ನು ಕೋರಿಕೊಂಡಿಲ್ಲ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಹೇಳಿದ್ದಾರೆ.
ಈ ಪ್ರಕರಣದ ತನಿಖೆ ನಡೆಸಿರುವ ಕೇಂದ್ರ ಕಾರ್ಪೊರೆಟ್ ವ್ಯವಹಾರಗಳ ಇಲಾಖೆಯಿಂದಲೂ ಯಾವುದೇ ಮಾಹಿತಿ ನನಗೆ ಬಂದಿಲ್ಲ ಎಂದು ಅವರು ಶುಕ್ರವಾರ ಇಲ್ಲಿ ಸ್ಪಷ್ಟಪಡಿಸಿದ್ದಾರೆ.
ಕಳೆದ ವಾರದಲ್ಲಿ ಈ ಕುರಿತು ಹೇಳಿಕೆ ನೀಡಿದ್ದ ಕೇಂದ್ರ ಕಾರ್ಪೊರೆಟ್ ವ್ಯವಹಾರಗಳ ಸಚಿವ ವೀರಪ್ಪ ಮೊಯಿಲಿ ಅವರು, ಮೆಗಾಸಿಟಿ ಯೋಜನೆಯಲ್ಲಿನ ಅವ್ಯವಹಾರಗಳ ಕುರಿತು ಸಚಿವಾಲಯವು ವರದಿ ನೀಡಿದ್ದು ಸರ್ಕಾರ ಇಷ್ಟರಲ್ಲೇ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದರು.