ರಂಗಭೂಮಿಯಲ್ಲಿನ ಅತ್ಯುತ್ತಮ ಸಾಧನೆ ಮಾಡಿದ ವ್ಯಕ್ತಿಗಳು ಮತ್ತು ರಂಗತಂಡಗಳಿಗೆ ಮಹೀಂದ್ರ ಕಂಪೆನಿ ನೀಡುತ್ತಿರುವ ರಾಷ್ಟ್ರೀಯ ಮಟ್ಟದ ಪ್ರಶಸ್ತಿ `ಮಹೀಂದ್ರ ಎಕ್ಸಲೆನ್ಸ್ ಇನ್ ಥಿಯೇಟರ್ ಅವಾರ್ಡ್ಸ್ (ಮೆಟ)ನಲ್ಲಿ ಈ ಬಾರಿ `ಮತ್ತೆ ಏಕಲವ್ಯ' ಮತ್ತು `ಆಫ್ಟರ್ ದಿ ಸೈಲೆನ್ಸ್' ತಲಾ ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಂಡವು.
ಎಂಟನೇ ವರ್ಷದ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಇದಾಗಿದ್ದು, `ಮತ್ತೆ ಏಕಲವ್ಯ' ತಂಡದ ಸತ್ಯಬ್ರತ ರಾವುತ್ (ಅತ್ಯುತ್ತಮ ನಿರ್ದೇಶಕ), ಮುಖ್ಯ ಪಾತ್ರಧಾರಿ ಡಿಂಗ್ರಿ ನರೇಶ್ (ಅತ್ಯುತ್ತಮ ನಟ) ಹಾಗೂ ಚಿದಂಬರ ಪೂಜಾರಿ ಮತ್ತು ಯಶವಂತ್ (ಪುರುಷರ ವಿಭಾಗದಲ್ಲಿ ಅತ್ಯುತ್ತಮ ಪೋಷಕ ನಟ) ಪ್ರಶಸ್ತಿಗೆ ಪಾತ್ರರಾದರು. `ಸಾಧನಾ ಸೆಂಟರ್ ಫಾರ್ ಕ್ರಿಯೇಟಿವ್ ಪ್ರಾಕ್ಟೀಸ್'ನ ವಲೇರಿಯಾ ಓಲ್ಗ್ವಿನ್, `ಆಫ್ಟರ್ ದಿ ಸೈಲೆನ್'ನ ನಟನೆಗಾಗಿ ಅತ್ಯುತ್ತಮ ಮುಖ್ಯ ಪಾತ್ರಧಾರಿ (ಮಹಿಳೆ) ಪ್ರಶಸ್ತಿ ಪಡೆದರು.
ಇತ್ತೀಚೆಗೆ ನಡೆದ ಮೆಟ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿಜೇತರಿಗೆ ಪ್ರದಾನ ಮಾಡಲಾಯಿತು. `ಮೆಟ 2013'ಕ್ಕೆ ನಿಸಾರ್ ಅಲ್ಲಾನ, ಶೋಭಾ ದೀಪಕ್ ಸಿಂಗ್, ಅನ್ಮೋಲ್ ವೆಲ್ಲಾನಿ, ರೇಣು ರಾಯ್, ಭಾನು ಭಾರತಿ ಮತ್ತು ಪವನ್ ಮಸ್ಕರ ತೀರ್ಪುಗಾರರಾಗಿದ್ದರು.