ಬೆಂಗಳೂರು: ನಗರದ ಎಂ.ಜಿ.ರಸ್ತೆಯಲ್ಲಿ ಮೆಟ್ರೊ ನಿಲ್ದಾಣದ ಮೆಟ್ಟಿಲುಗಳ ಕಾಮಗಾರಿಗೆ ಪೂರಕವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ ವಾಹನ ಚಾಲಕರು ತೊಂದರೆ ಅನುಭವಿಸುವಂತಾಗಿದೆ.
ಎಂ.ಜಿ.ರಸ್ತೆಯ ಮಧ್ಯಭಾಗದಲ್ಲಿ ಸುಮಾರು ಐವತ್ತು ಅಡಿಗಳ ಎತ್ತರದಲ್ಲಿ ಮೆಟ್ಟಿಲು ನಿರ್ಮಾಣವಾಗುತ್ತಿದೆ. ಅದರ ಕೆಳಗೆ ಸುರಕ್ಷತಾ ಬಲೆಗಳನ್ನು ಅಳವಡಿಸದೇ ಇರುವುದರಿಂದ ಕಲ್ಲು, ಕಬ್ಬಿಣದ ತುಂಡುಗಳು ಅನಿಲ್ ಕುಂಬ್ಳೆ ವೃತ್ತದಿಂದ ಬ್ರಿಗೇಡ್ ಜಂಕ್ಷನ್ ಕಡೆಗೆ ಸಾಗುವ ವಾಹನ ಸವಾರರ ಮೇಲೆ ಬೀಳುವ ಅಪಾಯ ಇದೆ.
‘ಇಲ್ಲಿ ಭಾರೀ ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ’ ಎಂದು ವಾಹನ ಚಾಲಕ ಪ್ರಸಾದ್ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
ಇತ್ತೀಚೆಗೆ ಮೆಟ್ಟಿಲು ನಿರ್ಮಾಣವಾಗುತ್ತಿರುವ ಸ್ಥಳದಿಂದ ಕಲ್ಲು ಬಿದ್ದು ಕಾರೊಂದು ಜಖಂಗೊಂಡಿತ್ತು. ಕೆಲ ದ್ವಿಚಕ್ರವಾಹನ ಸವಾರರು ಇಂಥ ಅವಘಡಗಳಿಂದ ಕೂದಲೆಳೆಯಂತರದಲ್ಲಿ ಪಾರಾದ ಉದಾಹರಣೆಗಳಿವೆ.