ಮೆನ್ನಬೆಟ್ಟು (ಮೂಲ್ಕಿ): `ಸಮಾಜದ ಎಲ್ಲಾ ವರ್ಗದವರಿಗೂ ಸಮಾನವಾದ ಹಕ್ಕುಗಳಿದ್ದು ಸರ್ಕಾರವು ನೀಡಿದ ವಿಶೇಷ ಯೋಜನೆಗಳನ್ನು ಸೂಕ್ತವಾಗಿ ಬಳಸಬೇಕು. ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರ ಆತ್ಮ ವಿಶ್ವಾಸವನ್ನು ಬೆಳೆಸುವಲ್ಲಿ ಇತರ ವರ್ಗದ ಜನರು ಸಹಕಾರಿಯಾಗಬೇಕು~ ಎಂದು ದ.ಕ.ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಭಟ್ ಹೇಳಿದರು.
ಕಿನ್ನಿಗೋಳಿ ಬಳಿಯ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಪಂಚಾಯಿತಿಯಿಂದ ಆರೋಗ್ಯ ವಿಮೆ ಕಾರ್ಡು ಮತ್ತು ಬಾಂಡ್ ಅನ್ನು ಉಚಿತವಾಗಿ ವಿತರಿಸಿ ಅವರು ಮಾತನಾಡಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು ಅಧ್ಯಕ್ಷತೆ ವಹಿಸಿದ್ದರು.
ದ.ಕ. ಜಿ.ಪಂ.ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ್ ಕಟೀಲ್, ತಾ.ಪಂ.ಸದಸ್ಯೆ ಬೇಬಿ ಎಸ್. ಕೋಟ್ಯಾನ್, ಜಿ.ಪಂ. ಮುಖ್ಯ ಯೋಜನಾಧಿಕಾರಿ ಮಹಮ್ಮದ್ ನಜೀರ್, ಬಂಟ್ವಾಳ ಎನ್.ಐ.ಸಿ. ಬ್ರಾಂಚ್ ಮ್ಯೋನೇಜರ್ ಪುಷ್ಪಲತಾ ಕೆ.ಪಿ. ಇದ್ದರು. ಪಂಚಾಯಿತಿ ಪಿಡಿಒ ಗಣೇಶ್ ಬಡಿಗೇರ ಸ್ವಾಗತಿಸಿ, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.