ಕುಶಾಲನಗರ: ಸರ್ಕಾರದ ವತಿಯಿಂದ ರೂ.37 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸರ್ಕಾರಿ ಎಂಜಿನಿಯಂರಿಂಗ್ ಕಾಲೇಜು ಕಟ್ಟಡದ ಕಾಮಗಾರಿಯು ಮೇ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಸೋಮವಾರ ತಿಳಿಸಿದರು.
ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಕಾಮಗಾರಿ ಪೂರ್ಣಗೊಂಡಿರುವ ತಾಂತ್ರಿಕ ವಿಭಾಗದ ಪ್ರಯೋಗ ಕೊಠಡಿ ಮತ್ತು ಎರಡನೇ ಬ್ಲಾಕ್ ಅನ್ನು ಸಂಸ್ಥೆಯ ಪ್ರಾಂಶುಪಾಲ ಡಾ. ಸತೀಶ್ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.
ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕೊಠಡಿ ಕೊರತೆಯಿದ್ದು, ಅಲ್ಲಿ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ತುಂಬಾ ಅನಾನುಕೂಲವಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ತರಗತಿ ನಡೆಸಲು ಅನುಕೂಲವಾಗುವಂತೆ ಕಟ್ಟಡ ಬಿಟ್ಟುಕೊಡಲಾಗಿದೆ ಎಂದರು.
ಈಗಾಗಲೇ ಮೊದಲ ಹಂತವಾಗಿ ರೂ.17.5 ಕೋಟಿ ಅನುದಾನ ಒದಗಿಸಲಾಗಿದೆ. ಎರಡನೇ ಹಂತದಲ್ಲಿ ರೂ.20 ಕೋಟಿ ಅನುದಾನ ಬಿಡುಗಡೆಯಾಗಲಿದೆ ಎಂದ ಅವರು, ವಿದ್ಯಾರ್ಥಿಗಳ ಭವಿಷ್ಯ ಗಮನದಲ್ಲಿರಿಸಿಕೊಂಡು ಕಟ್ಟಡ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳಬೇಕು. ಮೇ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.
2ನೇ ಬ್ಲಾಕ್ನಲ್ಲಿ ಮೆಕ್ಯಾನಿಕ್ ಮತ್ತು ಇ ಎಂಡ್ ಸಿ ವಿಭಾಗ ಸ್ಥಳಾಂತರಿಸಲಾಗಿದ್ದು, 350 ವಿದ್ಯಾರ್ಥಿಗಳಿಗೆ ಇಲ್ಲಿ ತರಗತಿ ನಡೆಸಲಾಗುತ್ತದೆ ಎಂದರು.
ಜಿ.ಪಂ.ಸದಸ್ಯ ಬಿ.ಬಿ.ಭಾರತೀಶ್, ತಾ.ಪಂ.ಸದಸ್ಯ ಬಿ.ವಿ.ಸತೀಶ್, ಮಡಿಕೇರಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಂ.ಎನ್. ಕುಮಾರಪ್ಪ, ಪ್ರಾಂಶುಪಾಲ ಡಾ.ಸತೀಶ್, ಸರ್ಕಾರಿ ಪಿಯು ಕಾಲೇಜಿನ ಕಾರ್ಯಾಧ್ಯಕ್ಷ ವಿ.ಎನ್. ವಸಂತ್ಕುಮಾರ್, ಸರ್ಕಾರಿ ಪಾಲಿ ಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಎಚ್.ವಿ. ಶಿವಪ್ಪ, ಪ.ಪಂ.ಸದಸ್ಯ ಪುಂಡಾರಿಕಾಕ್ಷ, ಆರ್ಎಂಸಿ ಅಧ್ಯಕ್ಷ ಪಿ.ಕೆ.ಶೇಷಪ್ಪ, ಕಾವೇರಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಕೆ.ದಿನೇಶ್, ಮುಖಂಡರಾದ ಜಿ.ಎಲ್.ನಾಗರಾಜು, ಎಚ್.ಎನ್.ರಾಮಚಂದ್ರ, ಎಚ್.ಎಂ.ಮಧುಸೂದನ್, ಕೆ.ಜಿ.ಮನು, ಎಂ.ಡಿ.ಕಷ್ಣಪ್ಪ, ವೈಶಾಖ್, ಶಿವಶಂಕರ್ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.