ಬೆಂಗಳೂರು: ಅಪೌಷ್ಟಿಕತೆಯಿಂದ ಬಳಲಿ ಮೃತಪಟ್ಟ ಮೇಘಲಾ ಕುಟುಂಬಕ್ಕೆ ನೀಡಿದ್ದ ಎಪಿಎಲ್ ಕಾರ್ಡ್ನ್ನು ಹಿಂಪಡೆದುಕೊಂಡು ಸರ್ಕಾರ ಕೊನೆಗೂ ಅಂತ್ಯೋದಯ ಕಾರ್ಡ್ ಒದಗಿಸಿದೆ.
ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ತಾಯಿ ಮುರುಗಮ್ಮ, `ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಮನೆಗೆ ಬಂದು ಪರಿಶೀಲನೆ ನಡೆಸಿ ಅಂತ್ಯೋದಯ ಕಾರ್ಡ್ನ್ನು ನೀಡಿದ್ದಾರೆ' ಎಂದು ತಿಳಿಸಿದರು.
`ಮೃತಪಟ್ಟ ಮಗಳು ಹಿಂತಿರುಗಿ ಬರುವುದಿಲ್ಲ. ಅಂಗನವಾಡಿ ಕೇಂದ್ರಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಇನ್ನಾದರೂ ಸಮರ್ಪಕ ಶುಶ್ರೂಷೆ ದೊರೆಯಬೇಕು. ನನ್ನ ಮಗಳಿಗೆ ಬಂದ ಸ್ಥಿತಿ ಯಾವ ಮಕ್ಕಳಿಗೂ ಬರಬಾರದು. ಇದೇ ನನ್ನ ಕಳಕಳಿ' ಎಂದು ನಿಟ್ಟುಸಿರು ಬಿಟ್ಟರು.
`ಇಷ್ಟು ದಿನ ಮೇಘಲಾಳ ಆರೈಕೆಯಲ್ಲಿ ತೊಡಗಿದ್ದ ಸಹೋದರಿ ರೂತ್ಳನ್ನು ಇನ್ನು ಮುಂದೆಯಾದರೂ ಶಾಲೆಗೆ ಕಳುಹಿಸುವ ಆಸೆಯಿದೆ. ಸರ್ಕಾರ ವಿಧವಾ ಪಿಂಚಣಿಯನ್ನು ಒದಗಿಸುವ ಸೌಜನ್ಯ ತೋರಿಸಿದರೆ ಈ ಬಡಜೀವಗಳು ಬದುಕಿಕೊಳ್ಳುತ್ತವೆ' ಎಂದು ಮನವಿ ಮಾಡಿದರು.
ರಾಜಧಾನಿಯ ಅಂಗನವಾಡಿ ಕೇಂದ್ರಗಳಲ್ಲಿ ಅಪೌಷ್ಟಿಕತೆಯಿಂದ ಬಳುತ್ತಿರುವ ಮಕ್ಕಳಿಗೆ ಸಿಗದ ಶುಶ್ರೂಷೆ, ಅಪೌಷ್ಟಿಕತೆಯಿಂದ ಬಳಲಿ ಮೃತಪಟ್ಟ ಮೇಘಲಾ ಹಾಗೂ ಕಡುಬಡತನವಿದ್ದರೂ ಆಕೆಯ ಕುಟುಂಬಕ್ಕೆ ಎಪಿಎಲ್ ಒದಗಿಸಿರುವ ಬಗ್ಗೆ `ಪ್ರಜಾವಾಣಿ' ಶನಿವಾರ ವಿಶೇಷ ವರದಿ ಪ್ರಕಟಿಸಿತ್ತು.