ಅಕ್ಕ-ತಂಗಿಯರ ಬಾಂಧವ್ಯದ ಹೊಸ ಕಥನವನ್ನು ಝೀ ಕನ್ನಡ ವಾಹಿನಿ ಧಾರಾವಾಹಿ ರೂಪದಲ್ಲಿ ತರುತ್ತಿದೆ.
ಇಬ್ಬರು ಅಕ್ಕ ತಂಗಿಯರು, ಅವರ ಇಬ್ಬರು ಹೆಣ್ಣುಮಕ್ಕಳ ಬದುಕಿನ ನೋವು ನಲಿವಿನ, ಅವಿಭಕ್ತ ಕುಟುಂಬದೊಳಗಿನ ಬದುಕಿನ ಚಿತ್ರಣಗಳನ್ನು ತೆರೆದಿಡುವ ಹೊಸ ಧಾರಾವಾಹಿ ‘ಮೇಘ ಮಯೂರಿ’.
ಅಮ್ಮನ ಪ್ರೀತಿಯ ಸಿರಿವಂತಿಕೆಯಲ್ಲಿ ಬೆಳೆದ ಮಯೂರಿಗೆ ಅಮ್ಮನನ್ನು ಕಳೆದುಕೊಳ್ಳುವ ಸ್ಥಿತಿ ಎದುರಾಗುತ್ತದೆ. ತಂದೆ ಯೊಡನೆ ದುಬೈಗೆ ತೆರಳುವ ಅಥವಾ ಗೋಕರ್ಣ ದಲ್ಲಿರುವ ದೊಡ್ಡಮ್ಮನ ಮನೆಗೆ ಹೋಗುವ ಎರಡು ಆಯ್ಕೆಗಳಲ್ಲಿ ಆಕೆ ಯಾವುದನ್ನು ಆಯ್ದುಕೊಳ್ಳುತ್ತಾಳೆ, ಆಕೆಯ ಬದುಕಿನ ದಿಕ್ಕು ಹೇಗೆ ಬದಲಾಗುತ್ತದೆ ಎಂಬುದೇ ‘ಮೇಘ ಮಯೂರಿ’ಯ ತಿರುಳು.
ಇದು ಹಿಂದಿಯಲ್ಲಿ ಜನಪ್ರಿಯವಾದ ‘ಸಪ್ನೆ ಸುಹಾನೆ ಲಡ್ಕೆ’ ಧಾರಾವಾಹಿಯ ಕನ್ನಡ ಅವತರಣಿಕೆ. ಕನ್ನಡಕ್ಕಾಗಿ ಚಿತ್ರಕಥೆಯನ್ನು ಸಂಪೂರ್ಣವಾಗಿ ಬದಲಾಯಿಸಿ ಕೊಳ್ಳಲಾಗಿದೆ. ಎರಡು ಪೀಳಿಗೆಯ ನಡುವಿನ ಅಂತರದ ಕಥನ ಇದರಲ್ಲಿದೆ ಎನ್ನುತ್ತಾರೆ ನಿರ್ದೇಶಕ ತ್ರಿಶೂಲ್.
ಮಯೂರಿಯಾಗಿ ಅಮೃತಾ ರಾಮಮೂರ್ತಿ, ಮೇಘಳ ಪಾತ್ರದಲ್ಲಿ ಹರ್ಷಿತಾ ನಟಿಸುತ್ತಿದ್ದಾರೆ. ಮಲ್ಲಿಕಾ ಪ್ರಸಾದ್, ಜ್ಯೋತಿ, ರಮೇಶ್ ಪಂಡಿತ್, ನಾಗೇಶ್ ಯಾದವ್, ಸುಷ್ಮಾ ನಾಣಯ್ಯ, ಅಶೋಕ್, ಮತ್ತಿತರ ಅನುಭವಿ ಕಲಾವಿದರ ದಂಡು ಈ ಧಾರಾವಾಹಿಯಲ್ಲಿದೆ. ಜನವರಿ ೧೩ರಿಂದ ಪ್ರತಿ ಸೋಮವಾರದಿಂದ ಶನಿವಾರ ರಾತ್ರಿ ೭.೩೦ಕ್ಕೆ ‘ಮೇಘ ಮಯೂರಿ’ ಪ್ರಸಾರವಾಗಲಿದೆ.