ನವದೆಹಲಿ (ಪಿಟಿಐ): ರಾಷ್ಟ್ರದ ಒಟ್ಟಾರೆ ಉತ್ಪಾದನೆಯಲ್ಲಿ (ಜಿಡಿಪಿ) ಶೇ 15ರಷ್ಟು ಕೊಡುಗೆ ನೀಡುವ ನೈರುತ್ಯ ಮುಂಗಾರು ಹಂಗಾಮು ಈ ಬಾರಿ ವಾಡಿಕೆಯಷ್ಟು ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂದಾಜಿಸಿದ್ದರೂ, ಈ ಕುರಿತ ಅಂತಿಮ ಮುನ್ಸೂಚನೆಗಾಗಿ ಮೇ ತಿಂಗಳ ಮೊದಲ ವಾರದವರೆಗೆ ಕಾಯಲು ನಿರ್ಧರಿಸಿದೆ.
ಈ ಕುರಿತು ನಾಲ್ಕು ವಿವಿಧ ದೇಶಗಳು ಮುನ್ಸೂಚನೆ ಸಿದ್ಧಪಡಿಸಿದ್ದು, ಎಲ್ಲವೂ ವಾಡಿಕೆ ಮಳೆಯನ್ನು ನಿರೀಕ್ಷಿಸಿವೆ ಎಂದು ಕೃಷಿ ಸಚಿವ ಶರದ್ ಪವಾರ್ ಅವರು ಹವಾಮಾನ ಇಲಾಖೆ ಅಧಿಕಾರಗಳ ಜತೆ ಸಭೆ ನಡೆಸಿದ ನಂತರ ಹೇಳಿದರು. ಜೂನ್- ಸೆಪ್ಟೆಂಬರ್ವರೆಗಿನ ಅವಧಿಯ ಮೊದಲ ಮುನ್ಸೂಚನೆಯನ್ನು ಏ.26ರಂದು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಇಲಾಖೆಯ ಮುಖ್ಯಸ್ಥ ಎಲ್.ಎಸ್.ರಾಥೋಡ್ ತಿಳಿಸಿದರು.
ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ತಾನಗಳು ತೀವ್ರ ಬರಕ್ಕೆ ಸಿಲುಕಿದ್ದು, ಈ ರಾಜ್ಯಗಳಲ್ಲಿ ಹೆಚ್ಚಿನ ಮಳೆ ಅಗತ್ಯವಿದೆ.
ಬುಧವಾರ ಖಾಸಗಿ ಸಂಸ್ಥೆಯೊಂದು ಮುಂಗಾರು ಮುನ್ಸೂಚನೆ ಪ್ರಕಟಿಸಿ, ಈ ಬಾರಿ ವಾಡಿಕೆಗಿಂತ ಸ್ವಲ್ಪ ಹೆಚ್ಚು (ಶೇ 103ರಷ್ಟು) ಮಳೆ ಸುರಿಯಲಿದೆ ಎಂದು ಹೇಳಿತ್ತು.