ಬೆಂಗಳೂರು: ‘ಎರಡು ದಶಕಗಳ ಬಳಿಕ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಮೇಯರ್ ಆಗುತ್ತಿರುವುದು ಸಂತಸದ ವಿಷಯ. ಆದರೆ ನೂತನ ಮೇಯರ್ ಜಾತಿ ಬೇಧವಿಲ್ಲದೆ ಸಮಾಜದ ಏಳಿಗೆಗಾಗಿ ಶ್ರಮಿಸುವ ಅಗತ್ಯವಿದೆ’ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನೂತನ ಮೇಯರ್ ಬಿ.ಎಸ್. ಸತ್ಯನಾರಾಯಣ ಅವರಿಗೆ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಸನ್ಮಾನವಷ್ಟೇ ಮುಖ್ಯವಲ್ಲ. ಬದಲಿಗೆ ಆ ಸ್ಥಾನದಲ್ಲಿ ಇದ್ದುಕೊಂಡು ಸಾಧಿಸಬೇಕಾದ ಕೆಲಸಗಳು ಮುಖ್ಯ. ಈ ನಿಟ್ಟಿನಲ್ಲಿ ಸತ್ಯನಾರಾಯಣ ಉತ್ತಮ ಕಾರ್ಯ ಕೈಗೊಂಡಿದ್ದು, ಯೋಜನೆಗಳನ್ನೂ ಹೊಂದಿದ್ದಾರೆ. ಅದಕ್ಕೆ ನಮ್ಮ ಸರ್ಕಾರದ ಬೆಂಬಲವೂ ಇದೆ’ ಎಂದು ಹೇಳಿದರು.
ಮಹಾಸಭಾದ ಅಧ್ಯಕ್ಷ ಬಿ.ಎನ್.ವಿ. ಸುಬ್ರಹ್ಮಣ್ಯ, ‘ನಮ್ಮ ಜನಾಂಗಕ್ಕೆ ಸೇರಿದವರಿಗೆ ಎರಡು ದಶಕಗಳ ಹಿಂದೆ ಬೆಂಗಳೂರು ಮೇಯರ್ ಆಗುವ ಅವಕಾಶ ದೊರಕಿತ್ತು. ಅಲ್ಲಿಂದ ಹಲವು ಬಾರಿ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಇದ್ದರೂ ಕಾರಣಾಂತರಗಳಿಂದ ಇಲ್ಲಿಯ ತನಕ ಸಮುದಾಯಕ್ಕೆ ಅವಕಾಶ ದೊರಕಿರಲಿಲ್ಲ. ಈಗ ಸತ್ಯನಾರಾಯಣ ಮೇಯರ್ ಆಗಿರುವುದು ಸಂತಸ ತಂದಿದೆ’ ಎಂದರು.
ಸಂಸದ ಅನಂತಕುಮಾರ್, ಶಾಸಕರಾದ ಆರ್.ಅಶೋಕ ಹಾಗೂ ರವಿ ಸುಬ್ರಹ್ಮಣ್ಯ ಪಾಲ್ಗೊಂಡಿದ್ದರು.