ಲಿಂಗಸುಗೂರು(ಮುದಗಲ್ಲ): ತಾಲ್ಲೂಕಿನ ಮುದಗಲ್ಲ ಪಟ್ಟಣ ಪಂಚಾಯಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಜ್ಜಬ್ಅಲಿ ನಬಿಸಾಬ ಹಳೆಪೇಟೆ ಹಾಗೂ ಉಪಾಧ್ಯಕ್ಷರಾಗಿ ಹಂಪಮ್ಮ ನಾಗನಗೌಡ ಕಿಲ್ಲಾ (ಅಕ್ಕಿ) ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಗುರುವಾರ ಬೆಳಿಗ್ಗೆ 11ಗಂಟೆಯೊಳಗೆ ಜೆಡಿಎಸ್ ಪಕ್ಷದ ಸದಸ್ಯರಾದ ರಜ್ಜಬ್ಅಲಿ ನಬಿಸಾಬ ಹಳೆಪೇಟೆ, ಎಸ್.ಈರಣ್ಣ ವಡ್ಡರ ಸೂಚಕರು ಹಾಗೂ ಹೇಮಂತ ಈರಣ್ಣ ಅನುಮೋದನೆಯ ನಾಮಪತ್ರವನ್ನು ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಹಂಪಮ್ಮ ನಾಗನಗೌಡ ಕಿಲ್ಲಾ, ರೇವತಿ ಚಂದ್ರಶೇಖರ ಸೂಚಕರು, ರಹೆಮತ್ಬೇಗಂ ಅನುಮೋದನೆ ನಾಮಪತ್ರ ಸಲ್ಲಿಸಿದರು.
ಮಧ್ಯಾಹ್ನ 1ಗಂಟೆಯ ಸಭೆಯಲ್ಲಿ 19 ಸದಸ್ಯರ ಪೈಕಿ ಜೆಡಿಎಸ್ ಪಕ್ಷದ 11 ಸದಸ್ಯರು ಹಾಜರಿದ್ದರು. ನಾಮಪತ್ರ ಪರಿಶೀಲಿಸಿದ ತಹಶೀಲ್ದಾರ್ ಕೆ. ಮಲ್ಲಿನಾಥ ನಾಮಪತ್ರ ಕ್ರಮಬದ್ಧವಾಗಿವೆ ಎಂದು ಸ್ವೀಕರಿಸಿದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಬಂದಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಸಾದಿಕ್ ಹಾಜರಿ: ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡು ಮೊದಲ ಸಭೆ ಆರಂಭಗೊಳ್ಳುವ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ಸಾದಿಕ್ಅಲಿ ಎಂಬುವವರು ಪಟ್ಟಣ ಪಂಚಾಯಿತಿಗೆ ಆಗಮಿಸುತ್ತಿದ್ದಂತೆ ರಾಜಕೀಯ ಚರ್ಚೆಗಳು ಬಿರುಸುಗೊಂಡವು. ಈ ಕುರಿತು ಪ್ರಜಾವಾಣಿ ಸಂಪರ್ಕಿಸಿದಾಗ ಚುನಾವಣಾ ಪ್ರಕ್ರಿಯೆಯಿಂದ ದೂರ ಇದ್ದೆ. ಪಪಂ ಮೊದಲ ಸಭೆಗೆ ಹಾಜರಾಗಿರುವೆ ಎಂದು ಸ್ಪಷ್ಟಪಡಿಸಿದರು.
ವಿಜಯೋತ್ಸವ: ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯರು ಅವಿರೋಧ ಆಯ್ಕೆ ಪ್ರಕಟಗೊಳ್ಳುತ್ತಿದ್ದಂತೆ ಶಾಸಕ ಮಾನಪ್ಪ ವಜ್ಜಲ ಸಭೆಗೆ ಆಗಮಿಸಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು, ಕಾರ್ಯಕರ್ತರು ಗುಲಾಲ ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿಕೊಂಡು ಸಂಭ್ರಮಿಸುತ್ತಿರುವುದು ಕಂಡು ಬಂದಿತು.
ಸೇವಾ ಭಾಗ್ಯ: ಐತಿಹಾಸಿಕ ಮುದಗಲ್ಲ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡಿರುವುದು ತಮ್ಮ ಭಾಗ್ಯ. ಶಾಸಕ ಮಾನಪ್ಪ ವಜ್ಜಲ ಹಾಗೂ ಸದಸ್ಯರ ಸಹಕಾರದಿಂದ ಜನತೆಗೆ ಸವಾಲಾಗಿರುವ ಕುಡಿಯುವ ನೀರು, ಸ್ವಚ್ಛತೆ, ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಿ ಜನದ ಸೇವೆ ಮಾಡುವ ಭಾಗ್ಯ ದೊರೆತದ್ದು ತಮ್ಮ ಭಾಗ್ಯ ಎಂದು ನೂತನ ಅಧ್ಯಕ್ಷ ರಜ್ಜಬ್ಅಲಿ ಹಳೆಪೇಟೆ ಹೇಳಿದರು.