ರಾಂಚಿ (ಪಿಟಿಐ): ಮೇವು ಹಗರಣದ ವಿಚಾರಣೆ ಮುಗಿಸಿದ ಸಿಬಿಐ ವಿಶೇಷ ನ್ಯಾಯಲಯವು ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಸೇರಿದಂತೆ 45 ಆರೋಪಿಗಳ ಕುರಿತು ಸೆ.30ರಂದು ತೀರ್ಪು ಪ್ರಕಟಿಸಲಿದೆ.
ಆರ್ಜೆಡಿ ಮುಖ್ಯಸ್ಥರೂ ಆದ ಲಾಲು ಪ್ರಸಾದ್ ವಾದವನ್ನು ಮಂಗಳವಾರ ಆಲಿಸಿದ ನ್ಯಾಯಾಧೀಶ ಪ್ರವಾಸ್ ಕುಮಾರ್, ತೀರ್ಪು ಪ್ರಕಟಣೆಯನ್ನು ಸೆ.30ಕ್ಕೆ ಕಾಯ್ದಿರಿಸಿದರು.
1990ರ ದಶಕದ ಆರಂಭದಲ್ಲಿ ಚೈಬಾಸಾ ಖಜಾನೆಯಿಂದ 37.7 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ನಗದು ಮಾಡಿಸಿಕೊಂಡ ಈ ಪ್ರಕರಣದಲ್ಲಿ, ಲಾಲು ಪ್ರಸಾದ್ ಪರವಾಗಿ ವಕೀಲ ಸುರೇಂದ್ರ ಸಿಂಗ್ ವಾದ ಮಂಡಿಸಿದರು.
ತಮ್ಮ ಕಕ್ಷಿದಾರನನ್ನು ವಿಚಾರಣೆಗೆ ಒಳಪಡಿಸಿರುವ ಪ್ರಕ್ರಿಯೆಯೇ ನಿಯಮಬಾಹಿರವಾಗಿದೆ. ಏಕೆಂದರೆ, ಆಗಿನ ರಾಜ್ಯಪಾಲರು ಸಚಿವ ಸಂಪುಟದ ಒಪ್ಪಿಗೆ ಪಡೆಯದೆ ಆರ್ಜೆಡಿ ಮುಖ್ಯಸ್ಥರ ವಿಚಾರಣೆಗೆ ಅನುಮತಿ ನೀಡಿದ್ದರು ಎಂದು ಸುರೇಂದ್ರ ಸಿಂಗ್ ವಾದಿಸಿದರು.
ಮೇವು ಹಗರಣ ಸಂಬಂಧ ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಲು ಸೂಚಿಸಿದ್ದೇ ಲಾಲು ಅವರು. ಈ ಸಂಬಂಧ ಅವರು ನೀಡಿದ್ದ ನಿರ್ದೇಶನದ ಮೇರೆಗೆ 41 ಎಫ್ಐಆರ್ಗಳು ದಾಖಲಾಗಿವೆ ಎಂದೂ ಸಿಂಗ್ ತರ್ಕಿಸಿದರು.
ಆದರೆ ಸಿಬಿಐ ಈ ವಾದವನ್ನು ಆಕ್ಷೇಪಿಸಿತು. ರಾಜ್ಯಪಾಲರಾದವರು ವಿಚಾರಣೆಗೆ ಅನುಮತಿ ನೀಡಲು ಸಚಿವ ಸಂಪುಟದ ಒಪ್ಪಿಗೆಯನ್ನೇನೂ ಪಡೆಯಬೇಕಿಲ್ಲ ಎಂದು ವಾದ ಮಂಡಿಸಿತು.