ಯಾದಗಿರಿ: ಇತಿಹಾಸ ಪ್ರಸಿದ್ಧವಾದ ತಾಲ್ಲೂಕಿನ ಮೈಲಾಪುರದ ಮೈಲಾರಲಿಂಗನ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ, ಆರಾಧ್ಯ ದೈವವಾದ ಮೈಲಾರಲಿಂಗನಿಗೆ ಪೂಜೆ ಸಲ್ಲಿಸಿದರು.
ಮಕರ ಸಂಕ್ರಾಂತಿಯಂದು ಜರುಗುವ ಮೈಲಾರಲಿಂಗನ ಜಾತ್ರೆಗೆ ಪ್ರತಿ ಎರಡು ವರ್ಷಕ್ಕೊಮ್ಮೆ ತಪ್ಪದೇ ಆಗಮಿಸುವ ನ್ಯಾ. ಶಿವರಾಜ ಪಾಟೀಲರು, ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ರಥಮ ಬಾರಿಗೆ ಮೈಲಾಪುರಕ್ಕೆ ಭೇಟಿ ನೀಡಿದರು. ಭಕ್ತಾದಿಗಳು, ದೇವಸ್ಥಾನದ ಅರ್ಚಕರು ನ್ಯಾಯಮೂರ್ತಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಅರ್ಚನೆಯ ನಂತರ ದೇವಾಲಯದ ಸುತ್ತಲೂ ವೀಕ್ಷಣೆ ಮಾಡಿದ ನ್ಯಾ. ಶಿವರಾಜ ಪಾಟೀಲರಿಗೆ, ದೇವಸ್ಥಾನದಲ್ಲಿರುವ ಸಮಸ್ಯೆಗಳ ಬಗ್ಗೆ ಭಕ್ತರು ಮನವಿ ಮಾಡಿದರು. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅಗತ್ಯ ಸೌಕರ್ಯ ಕಲ್ಪಿಸಬೇಕು. ಅರ್ಧಕ್ಕೆ ನಿಂತಿರುವ ಕಲ್ಯಾಣ ಮಂಟಪದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಭಕ್ತರ ಸೇವೆಗೆ ನೀಡಬೇಕು ಎಂದು ತಹಸೀಲ್ದಾರರಿಗೆ ಸೂಚನೆ ನೀಡಿದರು.
ನಂತರ ದೇವಸ್ಥಾನ ಸಮಿತಿ ಅಧ್ಯಕ್ಷರಾದ ತಹಸೀಲ್ದಾರ್ ಖಾಜಿ ನಫೀಜಾ ಮುತಾಲಿಕ ಹಾಗೂ ಸಿಬ್ಬಂದಿ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ನ್ಯಾ. ಶಿವರಾಜ ಪಾಟೀಲ, ಮೈಲಾರಲಿಂಗನ ದೇವಸ್ಥಾನದ ಪರಿಸರ ಸ್ವಚ್ಛತೆಗೆ ಅಧಿಕಾರಿಗಳು ಆದ್ಯತೆ ನೀಡಬೇಕು. ಭಕ್ತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಲಹೆ ಮಾಡಿದರು.
ಲೋಕಾಯುಕ್ತ ಡಿಎಸ್ಪಿ ರವಿ ಪಾಟೀಲ, ಡಾ. ಶರಣಭೂಪಾಲರೆಡ್ಡಿ, ದೇವಸ್ಥಾನದ ಕಾರ್ಯದರ್ಶಿ ಶಿವಾನಂದ ಮಠ, ಮಹಾದೇವಪ್ಪ, ಮಲ್ಲಯ್ಯ ಐಬತ್ತಿ, ಬಸವರಾಜ ಪೂಜಾರಿ, ಖಂಡಪ್ಪ ಪೂಜಾರಿ, ಸೋಮಣ್ಣ ಪೂಜಾರಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವರಾವ ಕುಲಕರ್ಣಿ, ಉಪಾಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ ಹತ್ತಿಕುಣಿ ಮುಂತಾದವರು ಹಾಜರಿದ್ದರು.