ಮೈಸೂರು: ಕೃಷ್ಣರಾಜಸಾಗರ (ಕೆಆರ್ಎಸ್) ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಿದ ಬಳಿಕ ಮೈಸೂರು- ಬೆಂಗಳೂರು ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ಇನ್ನೊಂದೆಡೆ ನಾಡಹಬ್ಬ ದಸರಾ ಉತ್ಸವದ ಸಿದ್ಧತೆಗಳು ಭರದಿಂದ ಸಾಗಿವೆ.
ಅ. 13 ರಿಂದ ಮೂರು ದಿನಗಳ ಕಾಲ ಸರ್ಕಾರಿ ರಜೆ ಇರುವುದರಿಂದ (ಅ. 13 ಎರಡನೇ ಶನಿವಾರ, ಅ. 14 ಭಾನುವಾರ, ಅ. 15 ಮಹಾಲಯ ಅಮವಾಸ್ಯೆ) ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆ ಇದೆ.
ಕಾವೇರಿ ಹೋರಾಟ ಕೊಂಚ ಸ್ಥಗಿತಗೊಂಡಿದ್ದು, ಜತೆಗೆ ಸಾಲು ಸಾಲು ರಜೆಗಳು ಇರುವುದರಿಂದ ಮೈಸೂರು ಅರಮನೆ, ಮೃಗಾಲಯ, ಸೇರಿದಂತೆ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಹೊರ ಜಿಲ್ಲೆ, ರಾಜ್ಯಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಬಹುದು ಎಂಬ ನಿರೀಕ್ಷೆ ಇಲ್ಲಿನ ವ್ಯಾಪಾರಸ್ಥರಲ್ಲಿ ಗರಿಗೆದರಿದೆ.