ಮೈಸೂರು: ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರು– ಕೊಡಗು ಮತ್ತು ನೆರೆಯ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಸೋಲಿನ ಬಿಸಿ ತಟ್ಟಿದೆ. ಮೈಸೂರಿನಲ್ಲಂತೂ ಇದು ಸಿದ್ದರಾಮಯ್ಯ ಪಾಲಿಗೆ ಅರಗಿಸಿಕೊಳ್ಳಲಾಗದ ಮುಖಭಂಗ.
40 ವರ್ಷ ರಾಜಕೀಯದ ಅನುಭವವುಳ್ಳ ಕಾಂಗ್ರೆಸ್ನ ಅಡಗೂರು ಎಚ್. ವಿಶ್ವನಾಥ್ ಎದುರು ಚೊಚ್ಚಲ ಸ್ಪರ್ಧೆಯಲ್ಲೇ ಪತ್ರಕರ್ತ, ಬಿಜೆಪಿಯ ಪ್ರತಾಪ್ ಸಿಂಹ 31,608 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಎದುರಾಳಿಗಳಷ್ಟೇ ಅಲ್ಲದೆ ಬಿಜೆಪಿಯ ಪಾಳೆಯದಲ್ಲೂ ಅಚ್ಚರಿ ಮೂಡಿಸಿದ್ದಾರೆ!
ವಿಶ್ವನಾಥ್ ಎದುರು ಹೊಸ ಮುಖ ಪ್ರತಾಪ್ ಸಿಂಹ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದಾಗ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿತ್ತು. ಕುರುಬ ಸಮುದಾಯದ ವಿಜಯಶಂಕರ್ ಅವರಿಗೆ ಟಿಕೆಟ್ ತಪ್ಪಿಸಿ, ರಾಜಕೀಯಕ್ಕೆ ಹೊಸಬರಾದ ಪ್ರತಾಪ ಅವರನ್ನು ಸ್ಪರ್ಧೆಗೆ ಇಳಿಸಿದ್ದರಿಂದ ಗೆಲುವಿನ ಹಾದಿ ಸುಗಮವಾಯಿತು ಎಂದು ಕಾಂಗ್ರೆಸ್ ಸಹ ನಿರಾಳವಾಗಿತ್ತು.
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶಾಸಕ ಅಪ್ಪಚ್ಚು ರಂಜನ್ ಅವರು ಮಾಧ್ಯಮದವರ ಬಳಿ ‘ಪ್ರತಾಪ್ ಸಿಂಹ ಯಾರು?’ ಎಂದು ಪ್ರಶ್ನಿಸಿದ್ದರು. ಬಿಜೆಪಿಯೊಳಗಿನ ಇಂಥ ಅಸಮಾಧಾನದ ಹೊಗೆ ವರದಾನವಾಗಲಿದೆ ಎಂದು ಕಾಂಗ್ರೆಸ್ ನಂಬಿತ್ತು. ಆದರೆ, ಆ ಲೆಕ್ಕಾಚಾರ ತಲೆಕೆಳಗು ಮಾಡಿ ಪ್ರತಾಪ್ ಗೆದ್ದಿದ್ದಾರೆ.
ದಡ ಮುಟ್ಟಿಸಿದ ಒಕ್ಕಲಿಗ ಮತಗಳು: ಆರಂಭದಲ್ಲಿ ಎದುರಾಳಿ ಮತ್ತು ತಮ್ಮ ಪಕ್ಷದವರಿಗೂ ‘ದುರ್ಬಲ’ರಂತೆ ಕಂಡ ಪ್ರತಾಪ್, ದಿನಗಳು ಉರುಳುತ್ತಿದ್ದಂತೆಯೇ ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ನಿವಾರಿಸಿಕೊಂಡು, ಎದುರಾಳಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮನ್ನು ನಿರ್ಲಕ್ಷ್ಯ ಮಾಡುವಂತಿಲ್ಲ ಎಂಬ ಸಂದೇಶ ರವಾನಿಸಿದರು. ಆದರೆ, ಅವರನ್ನು ‘ಗೆಲುವಿನ ದಡ ಮುಟ್ಟಿಸಿದ್ದು ಮೋದಿ ಅಲೆಯ ಜತೆ ಒಕ್ಕಲಿಗ ಸಮುದಾಯದ ಮತಗಳು’ ಎಂದು ಹೇಳಲಾಗುತ್ತಿದೆ.
ಭಾಗವಹಿಸಿದ ಸಭೆ–ಸಮಾರಂಭಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಜೆಡಿಎಸ್ ವರಿಷ್ಠ ಹಾಗೂ ಒಕ್ಕಲಿಗ ಸಮುದಾಯದ ನಾಯಕ ಎಚ್.ಡಿ. ದೇವೇಗೌಡ ಮತ್ತು ಅವರ ಕುಟುಂಬದ ಸದಸ್ಯರನ್ನು ಲೇವಡಿ ಮಾಡುವ ಪರಿಪಾಠದಿಂದ ಒಕ್ಕಲಿಗ ಸಮುದಾಯದಲ್ಲಿ ವಿಶ್ವನಾಥ್ ಬಗ್ಗೆ ಆಕ್ರೋಶ ಮಡುಗಟ್ಟಿತ್ತು.
ಈ ಚುನಾವಣೆಯಲ್ಲಿ ಜೆಡಿಎಸ್ ಅಧಿಕೃತ ಅಭ್ಯರ್ಥಿ (ಚಂದ್ರಶೇಖರಯ್ಯ) ಒಕ್ಕಲಿಗರಾದರೂ, ‘ಗೆಲ್ಲುವ ಅಭ್ಯರ್ಥಿ’ಯಲ್ಲ ಎಂಬ ಕಾರಣದಿಂದ ಈ ಸಮುದಾಯ ವಿಶ್ವನಾಥ್ ಅವರನ್ನು ಹಣಿಯಲು ಕಣದಲ್ಲಿದ್ದ ತಮ್ಮದೇ ಸಮುದಾಯದ ಬಿಜೆಪಿಯ ಪ್ರತಾಪ್ ಸಿಂಹ ಅವರನ್ನು ಬಳಸಿಕೊಂಡಿತು. ಇದಕ್ಕೆ ಜೆಡಿಎಸ್ ನಾಯಕಗಣವೂ ಪರೋಕ್ಷವಾಗಿ ‘ಒತ್ತಾಸೆ’ಯಾಗಿ ನಿಂತಿತ್ತು ಎಂಬ ಊಹಾಪೋಹವನ್ನು ಪ್ರತಾಪ್ ಗೆಲುವು ಖಚಿತಪಡಿಸಿದಂತಿದೆ.
ಹಾಸನ
ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಕಾಂಗ್ರೆಸ್ ಪ್ರತಿಸ್ಪರ್ಧಿ ಎ. ಮಂಜು (ಕಾಂಗ್ರೆಸ್) ಅವರನ್ನು 1,00,462 ಮತಗಳ ಅಂತರದಿಂದ ಸೋಲಿಸಿ, ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಇದರೊಂದಿಗೆ ದೇವೇಗೌಡರು ಹಾಸನದಲ್ಲಿ ಐದು ಗೆಲುವು ಹಾಗೂ ಒಮ್ಮೆ ಸೋಲು ದಾಖಲಿಸಿದಂತಾಗಿದೆ.
ಇಲ್ಲಿ ಸಿದ್ದರಾಮಯ್ಯ ಮತ್ತು ದೇವೇಗೌಡರ ನಡುವಿನ ಹೋರಾಟ ಎಂದೇ ಈ ಚುನಾವಣೆಯನ್ನು ನೋಡಲಾಗುತ್ತಿತ್ತು. ‘ನಮ್ಮ ಮುಂದಿನ ಗುರಿ ಹಾಸನ’ ಎಂದು ಸಿದ್ದರಾಮಯ್ಯ ಗುಡುಗಿದ್ದರು. ಹಾಗಾಗಿ ಇದು ಪ್ರತಿಷ್ಠಿತ ಕಣವಾಗಿ ಗಮನ ಸೆಳೆದಿತ್ತು. ಆದರೆ ಗೆಲುವಿನ ಅಂತರ ಕಡಿಮೆಯಾಗಿದೆ. ಕಳೆದ ಚುನಾವಣೆಯಲ್ಲಿ ಗೌಡರು ಗೆದ್ದಿದ್ದು 3 ಲಕ್ಷ ಮತಗಳಿಂದ.
ಚಾಮರಾಜನಗರ
ಚಾಮರಾಜನಗರ ಕ್ಷೇತ್ರ ಮತ್ತೆ ‘ಕೈ’ ವಶವಾಗಿದೆ. ಕಾಂಗ್ರೆಸ್ನ ಆರ್. ಧ್ರುವನಾರಾಯಣ ಅವರು ಬಿಜೆಪಿಯ ಎ.ಆರ್. ಕೃಷ್ಣಮೂರ್ತಿ ವಿರುದ್ಧ 1,41,182 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಸಂಸದರ ನಿಧಿಯಡಿ ಲಭಿಸಿದ ಅನುದಾನವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡ ಹೆಗ್ಗಳಿಕೆ ಧ್ರುವನಾರಾಯಣ ಅವರದ್ದು.
ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ಎಲ್ಲ ವರ್ಗದ ಜನರೊಂದಿಗೆ ಸಾಮರಸ್ಯ ಕಾಯ್ದುಕೊಂಡಿದ್ದು ಅವರ ಗೆಲುವಿಗೆ ಸಹಕಾರಿಯಾಯಿತು. ಹಾಗಾಗಿ, ಕೃಷ್ಣಮೂರ್ತಿ ಅವರ ಬೆನ್ನಿಗಿದ್ದ ‘ಅನುಕಂಪ’ದ ಅಸ್ತ್ರ ಕೂಡ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಲಾಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.