ಮೈಸೂರು: ತಾಲ್ಲೂಕಿನ ಚಿಕ್ಕನಹಳ್ಳಿ ರಕ್ಷಿತ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಅರಸಿನಕೆರೆ ಬಳಿ ಮೂರು ವರ್ಷದ ಗಂಡು ಚಿರತೆ ಭಾನುವಾರ ಬೆಳಿಗ್ಗೆ ಕಾಣಿಸಿಕೊಂಡು ಆತಂಕದ ವಾತಾವರಣವನ್ನು ಸೃಷ್ಟಿಸಿತು.
ಆಹಾರವಿಲ್ಲದೆ ನಿತ್ರಾಣಗೊಂಡಿದ್ದ ಚಿರತೆ ಓಡಲಾಗದೆ ಅಲ್ಲಲ್ಲೇ ಸುತ್ತಾಡುತ್ತಿತ್ತು. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸ್ವಾಮಿ ಬೆಳಿಗ್ಗೆ 8.30ರ ಸುಮಾರಿನಲ್ಲಿ ಚಿರತೆಯನ್ನು ಕಂಡು ಗಾಬರಿಕೊಂಡು ಓಡಿದರು. ನಂತರ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು.
ಎಸಿಎಫ್ ದುರ್ಗೇಗೌಡ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ನಿತ್ರಾಣಗೊಂಡ ಚಿರತೆಯನ್ನು ಬಲೆಗೆ ಬೀಳಿಸಲು ಯತ್ನಿಸಿದರು. ಆದರೆ ಸಿಬ್ಬಂದಿಯ ಮೇಲೆ ಚಿರತೆ ತಿರುಗಿಬಿದ್ದಿತು.
ಕೊನೆಗೆ ಅರಿವಳಿಕೆ ಚುಚ್ಚುಮದ್ದನ್ನು ನೀಡಿ ಬೆಳಿಗ್ಗೆ 11.40 ಸುಮಾರಿನಲ್ಲಿ ಚಿರತೆಯನ್ನು ಬಲೆಗೆ ಬೀಳಿಸುವಲ್ಲಿ ಸಿಬ್ಬಂದಿ ಯಶಸ್ವಿಯಾದರು. ಡಾ.ನಾಗರಾಜ್ ಚಿರತೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ಬಳಿಕ ಬೋನಿನಲ್ಲಿ ಸಾಗಿಸಿ ಸುಂಕದಕಟ್ಟೆ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.
ಜನಜಾತ್ರೆ
ಚಿರತೆ ಪ್ರತ್ಯಕ್ಷವಾಗಿರುವ ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಅರಸಿನಕರೆಯತ್ತ ದೌಡಾಯಿಸಿದರು. ನಿತ್ರಾಣಗೊಂಡ ಚಿರತೆ ಓಡದ ಪರಿಸ್ಥಿತಿಯನ್ನು ಅರಿತು ಅದರ ಹತ್ತಿರವೇ ಜನರು ಸುಳಿದಾಡತೊಡಗಿದರು. ಚಿರತೆ ಬಳಿ ಸುಳಿದಾಡದಂತೆ ಜನರನ್ನು ಮನವೊಲಿಸಿ ದೂರ ಕಳುಹಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹೆಣಗಾಡಿದರು.