ಮೈಸೂರು: ಇಲ್ಲಿನ ಶ್ರೀ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ನಾಲ್ಕು ಬೇಟೆ ಚೀತಾ ಮರಿಗಳು ಮೃತಪಟ್ಟ ಬೆನ್ನಲ್ಲೇ ಆಫ್ರಿಕಾದ ಕಪ್ಪು ಹೆಣ್ಣು ಘೇಂಡಾಮೃಗ `ಪ್ರಿಯಾ~ ಗುರುವಾರ ಮಧ್ಯಾಹ್ನ ಮೃತಪಟ್ಟಿದೆ.
ಬೆಳಿಗ್ಗೆಯಷ್ಟೇ ನಿತ್ರಾಣಗೊಂಡಿದ್ದ `ಪ್ರಿಯಾ~ಳಿಗೆ ತಕ್ಷಣವೇ ಅಗತ್ಯ ಚಿಕಿತ್ಸೆ ನೀಡಲಾಗಿತ್ತು. ಆದಾಗ್ಯೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ತೀವ್ರವಾದ ನ್ಯುಮೋನಿಯ, ತೀವ್ರ ಸ್ವರೂಪದ ಪಿತ್ತಕೋಶದ ರೋಗ, ಸಹಜವಾದ ಆಂತರಿಕ ರಕ್ತಸ್ರಾವ ಲಕ್ಷಣಗಳು ಸಣ್ಣ ಮತ್ತು ದೊಡ್ಡ ಕರುಳಿನಲ್ಲಿ ಕಂಡು ಬಂದಿವೆ. ತೀವ್ರ ರಕ್ತಸ್ರಾವದಿಂದ ಉಂಟಾದ ನಂಜಿನಿಂದ ಇದು ಮೃತಪಟ್ಟಿರಬಹುದು ಎಂದು ಭಾವಿಸಲಾಗಿದೆ.
`ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಸ್.ಎಸ್.ಎಂ.ಎಸ್.ಖಾದ್ರಿ ಮತ್ತು ಡಾ.ಸಂಜೀವಮೂರ್ತಿ ಹಾಗೂ ಮೃಗಾಲಯದ ಪಶುವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದರು. ಪ್ರಿಯಾಳ ದೇಹದ ಕೆಲವು ಅಂಗಾಂಗಳನ್ನು (ಆಟಾಪ್ಸಿ) ಸಂಗ್ರಹಿಸಿ ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ~ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ರವಿ ತಿಳಿಸಿದ್ದಾರೆ.
1996ರಲ್ಲಿ ಜನಿಸಿದ್ದ `ಪ್ರಿಯಾ~ಗೆ 16 ವರ್ಷವಾಗಿತ್ತ ಲ್ಲದೆ, ಮೃಗಾಲಯದ ಏಕೈಕ ಘೇಂಡಾಮೃಗವಾಗಿತ್ತು.