ಹುಬ್ಬಳ್ಳಿ: ನೈರುತ್ಯ ರೈಲ್ವೆಯು ಮೈಸೂರು- ಸಾಯಿನಗರ ಶಿರಡಿ- ಮೈಸೂರು ನಡುವೆ ಈಗಾಗಲೇ ಸಂಚರಿಸುತ್ತಿರುವ (ಸಂಖ್ಯೆ 06201/06202) ವಿಶೇಷ ಸಾಪ್ತಾಹಿಕ ರೈಲುಗಳ ಸಂಚಾರವನ್ನು ಮಾರ್ಚ್ 26ರವರೆಗೆ ಮುಂದುವರಿಸಲು ತೀರ್ಮಾನಿಸಿದೆ.
ಪ್ರತಿ ಸೋಮವಾರ ಬೆಳಿಗ್ಗೆ 5.30ಕ್ಕೆ ಮೈಸೂರಿನಿಂದ ಹೊರಡುವ ರೈಲು (ಸಂಖ್ಯೆ 06201) ಶಿರಡಿಯನ್ನು ಮಂಗಳವಾರ 11.30ಕ್ಕೆ ತಲುಪುತ್ತದೆ. ಬೆಂಗಳೂರು, ಧರ್ಮಾವರಂ, ಗುಂತಕಲ್, ಬಳ್ಳಾರಿ, ಹೊಸಪೇಟೆ, ಗದಗ, ವಿಜಾಪುರ ಮತ್ತು ಸೊಲ್ಲಾಪುರ ಮಾರ್ಗವಾಗಿ ಈ ರೈಲು ಸಂಚರಿಸಲಿದೆ.
ಶಿರಡಿಯಿಂದ ಪ್ರತಿ ಮಂಗಳವಾರ ಹೊರಡುವ ರೈಲು (ಸಂಖ್ಯೆ 06202) ಗುರುವಾರ ಬೆಳಿಗ್ಗೆ 7.10ಕ್ಕೆ ಮೈಸೂರು ತಲುಪುತ್ತದೆ. ವಾಪಸಾಗುವ ಮಾರ್ಗದಲ್ಲಿಯೂ ಮೇಲ್ಕಂಡ ನಿಲ್ದಾಣಗಳ ಮೂಲಕವೇ ರೈಲು ಸಂಚರಿಸುತ್ತದೆ.
ರೈಲು ರದ್ದು
ಉಪ ಮಾರ್ಗ, ಸೇತುವೆ ಸೇರಿದಂತೆ ಕೆಲವು ತುರ್ತು ಕಾಮಗಾರಿ ಆರಂಭಿಸಿರುವುದರಿಂದ ಮೈಸೂರು ವಿಭಾಗದ ಶಿವಮೊಗ್ಗ- ಮೈಸೂರು ಹಾಗೂ ಮೈಸೂರು- ಶಿವಮೊಗ್ಗ ರೈಲು ಸಂಚಾರ ರದ್ದು ಪಡಿಸಲಾಗಿದೆ.
ಇನ್ನು ಕೆಲವು ರೈಲುಗಳ ಸಂಚಾರವನ್ನು ಅರಸೀಕೆರೆಯಿಂದ ಮಂದಗೆರೆವರೆಗೆ ಮಾತ್ರ ನಿಗದಿಗೊಳಿಸಲಾಗಿದೆ.