ಕಡೂರು: ತಾಲ್ಲೂಕು ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಬಿಜೆಪಿ ಸದಸ್ಯೆ ಎ.ಇ.ರತ್ನ(ಬಿಸಲೆರೆ), ಉಪಾಧ್ಯಕ್ಷೆಯಾಗಿ ಗೀತಾಪ್ರಭಾಕರ್(ಪಟ್ಟಣಗೆರೆ) ಗುರುವಾರ ಅವಿರೋಧವಾಗಿ ಆಯ್ಕೆಯಾದರು. ತರೀಕೆರೆ ಉಪ ವಿಭಾಗಾಧಿಕಾರಿ ಶಶಿಧರ್ ಕುರೇರಾ ಈ ವಿಷಯ ಘೋಷಿಸಿದರು. ತಾ.ಪಂನಲ್ಲಿ ಬಿಜೆಪಿ 13, ಕಾಂಗ್ರೆಸ್ 4, ಜೆಡಿಎಸ್ 6, ಪಕ್ಷೇತರರು 1 ಸ್ಥಾನ ಗಳಿಸಿತ್ತು. ಸರಳ ಬಹುಮತಗಳಿಸಿದ್ದ ಬಿಜೆಪಿ ತಾಲ್ಲೂಕಿನ ಇತಿಹಾಸದಲ್ಲಿ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದಿದೆ. ಈ ಸಂದರ್ಭದಲ್ಲಿ ಶಾಸಕ ಡಾ.ವೈ.ಸಿ.ವಿಶ್ವನಾಥ್ ತಾಲ್ಲೂಕಿನ ಮತದಾರರನ್ನು ಹಾಗೂ ನೂತನ ಸದಸ್ಯರನ್ನು ಸಂತಸದಿಂದ ಅಭಿನಂದಿಸಿದರು. ತಾಲ್ಲೂಕು ಪಂಚಾಯಿತಿಗೆ 7-8 ಕೋಟಿ ಹಣ ನೀಡುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿರುವುದಾಗಿ ತಿಳಿಸಿದರು.
ನೂತನ ಅಧ್ಯಕ್ಷೆ ಎ.ಇ.ರತ್ನ ಮಾತನಾಡಿ, ಪಕ್ಷವು ಮೊದಲ ಬಾರಿಗೆ ಅಧಿಕಾರ ನನ್ನ ಪಾಲಾಗಿದೆ. ಈ ಅವಧಿಯಲ್ಲಿ ಎಲ್ಲಾ ಸದಸ್ಯರ ಅಭಿಪ್ರಾಯ ಸಲಹೆ, ಸೂಚನೆಗಳನ್ನು ಪಡೆದು ಕರ್ತವ್ಯ ನಿರ್ವಹಿಸುವ ಭರವಸೆ ನೀಡಿದರು. ಸಮಾರಂಭದಲ್ಲಿ ತಾ.ಬಿಜೆಪಿ ಅಧ್ಯಕ್ಷ ರಾಜಶೇಖರ್, ಮಾಜಿ ಜಿ.ಪಂ ಅಧ್ಯಕ್ಷ ಬೆಳ್ಳಿ ಪ್ರಕಾಶ್, ಜಿಪಂ ಸದಸ್ಯರಾದ ಕಲ್ಮರಡಪ್ಪ, ಕವಿತಾಬೆಳ್ಳಿ ಪ್ರಕಾಶ್, ಶಶಿರೇಖಾ ಸುರೇಶ್, ಪದ್ಮಚಂದ್ರಪ್ಪ, ಮಾಲಿನಿಬಾಯಿ ರಾಜನಾಯ್ಕಿ ನೂತನ ಆಡಳಿತ ಮಂಡಳಿಯ ಸದಸ್ಯರನ್ನು ಕುರಿತು ಮಾತನಾಡಿದರು.
ತಾ.ಪಂ ಸದಸ್ಯರಾದ ಶಿವಕುಮಾರ್, ಸುನಿತಾ ಚಿದಾನಂದ, ಶೋಭ ವೆಂಕಟೇಶ್, ಬಸವರಾಜಪ್ಪ, ಓಂಕಾರಪ್ಪ, ಜಯಬಾಯಿ, ಮಲ್ಲಿಗಮ್ಮ, ಪ್ರದೀಪ್ನಾಯ್ಕ ಹಾಗೂ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿ ಸಿಹಿ ಹಂಚಿದರು.