ರಾಮನಗರ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಹಮ್ಮಿಕೊಳ್ಳಲಾಗಿರುವ ರಾಜ್ಯಮಟ್ಟದ ಮೊದಲ ವಿಪ್ರ ಸಂಪರ್ಕ ಅಭಿಯಾನಕ್ಕೆ ಭಾನುವಾರ ಇಲ್ಲಿ ಚಾಲನೆ ದೊರೆಯಿತು.
ರಾಮನಗರದ ಸೀತಾರಾಮ ಭಜನಾ ಮಂದಿರದಲ್ಲಿ ಅಭಿಯಾನವನ್ನು ಮಹಾಸಭಾದ ಅಧ್ಯಕ್ಷ ಬಿ.ಎನ್.ವಿ. ಸುಬ್ರಹ್ಮಣ್ಯ ಉದ್ಘಾಟಿಸಿದರು. ಬ್ರಾಹ್ಮಣ ಸಮುದಾಯದ ಶ್ರೇಯೋಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಸಮಾಜ ಮುಖಿಯಾಗಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯದ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ, ವಿಪ್ರ ಬಾಂಧವರ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು. ಸಂಘಟನೆ, ಸದಸ್ಯತ್ವ ನೋಂದಣಿ, ಜನಗಣತಿ, ಮಹಿಳೆಯರಿಗೆ, ವಿದ್ಯಾರ್ಥಿ ನಿಲಯಗಳಿಗೆ ಧನ ಸಂಗ್ರಹಣೆ, ಸಂಪನ್ಮೂಲ ಕ್ರೋಡೀಕರಣ ಮೊದಲಾದ ಉದ್ದೇಶಗಳನ್ನು ಅಭಿಯಾನ ಹೊಂದಿದೆ ಎಂದರು.