ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ: ಸೌಲಭ್ಯಕ್ಕಾಗಿ ವಿದ್ಯಾರ್ಥಿಗಳ ಧರಣಿ

Last Updated 16 ಸೆಪ್ಟೆಂಬರ್ 2011, 6:05 IST
ಅಕ್ಷರ ಗಾತ್ರ

ಮಾನ್ವಿ: ಪಟ್ಟಣದ ಅಲ್ಪಸಂಖ್ಯಾತರ ಇಲಾಖೆಯ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ವಿವಿಧ ಸೌಲಭ್ಯಗಳಿಗೆ ಒತ್ತಾಯಿಸಿ ವಿದ್ಯಾರ್ಥಿಗಳು ಗುರುವಾರ ಬೆಳಿಗ್ಗೆ ಉಪಹಾರ ತ್ಯಜಿಸಿ ಸುಮಾರು ನಾಲ್ಕು ಗಂಟೆಗಳ ಕಾಲ ಶಾಲೆಯ ಮುಂದೆ ಧರಣಿ ನಡೆಸಿದರು.

`ಶಾಲೆಗಳು ಆರಂಭವಾಗಿ ನಾಲ್ಕು ತಿಂಗಳು ಗತಿಸಿದರೂ ನೋಟ್‌ಬುಕ್‌ಗಳು ಹಾಗೂ 8ನೇ ತರಗತಿಯ ಹಿಂದಿ ಪುಸ್ತಕ ವಿತರಿಸಿಲ್ಲ. ಶಿಕ್ಷಕರು ವೇಳಾಪಟ್ಟಿ ಅನುಸಾರ ತರಗತಿಗಳ ನಿರ್ವಹಣೆ ಮಾಡುತ್ತಿಲ್ಲ~ ಎಂದು ದೂರಿದರು.

`ಗಣಿತ ಹಾಗೂ ಇಂಗ್ಲಿಷ್ ಶಿಕ್ಷಕರನ್ನು ಹೊರತುಪಡಿಸಿ ಉಳಿದ ಎಲ್ಲಾ ಶಿಕ್ಷಕರು ತಮ್ಮ ಮನಸ್ಸಿಗೆ ಬಂದಂತೆ ತರಗತಿಗೆ ಬಂದು ಬೇಕಾಬಿಟ್ಟಿ ಪಾಠ ಮಾಡುತ್ತಾರೆ. ನಿರಂತರವಾಗಿ ಗೈರು ಹಾಜರಾಗುವ ಶಿಕ್ಷಕರು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಕಂಪ್ಯೂಟರ್ ಶಿಕ್ಷಕರು ಇಲ್ಲ. ಇರುವ ನಾಲ್ಕು ಕಂಪ್ಯೂಟರ್‌ಗಳಲ್ಲಿ ಒಂದು ಮಾತ್ರ ಬಳಕೆಗೆ ಯೋಗ್ಯವಾಗಿದ್ದು, ಅದನ್ನು ಕಲಿಕೆಗೆ ಉಪಯೋಗಿಸುತ್ತಿಲ್ಲ~ ಎಂದು ಆರೋಪಿಸಿದರು.

`ದೈಹಿಕ ಶಿಕ್ಷಣದ ಶಿಕ್ಷಕರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಎಲ್ಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿಲ್ಲ. ಕ್ರೀಡಾ ಸಾಮಾಗ್ರಿಗಳಂತೂ ಇಲ್ಲವೇ ಇಲ್ಲ. ಆಟದ ಮೈದಾನ ಇಲ್ಲ. ಶಾಲೆಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಊಟ ಹಾಗೂ ಉಪಾಹಾರ ಸರಿಯಾಗಿ ಇರುವುದಿಲ್ಲ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಧರಣಿ ನಿರತ ವಿದ್ಯಾರ್ಥಿಗಳು ದೂರಿದರು.

ಬಿಸಿಎಮ್ ಇಲಾಖೆಯ ತಾಲ್ಲೂಕು ವಿಸ್ತರಣಾಧಿಕಾರಿ ಎಮ್.ಎಸ್.ಗೋನಾಳ ಮತ್ತಿತರ ಅಧಿಕಾರಿಗಳು ಶಾಲೆಗ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು. ಅಗತ್ಯ ನೋಟ್‌ಬುಕ್‌ಗಳನ್ನು ಕೂಡಲೇ ತರಿಸಿ ವಿತರಿಸಿದರು. ವಿದ್ಯಾರ್ಥಿಗಳ  ಇನ್ನಿತರ ಸಮಸ್ಯೆಗಳನ್ನು ಆದಷ್ಟು ಬೇಗನೇ  ಪರಿಹರಿಸುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT