ಅಹಮದಾಬಾದ್ (ಪಿಟಿಐ): ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್ ವಿಶ್ವವಿದ್ಯಾಲಯದ ಸಭಾ ಭವನದಲ್ಲಿ ಕೈಗೊಂಡಿರುವ `ಸದ್ಭಾವನಾ ಉಪವಾಸ~ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ದೇಶ ವಿದೇಶಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಭಾನುವಾರ ಬೆಳಗಿನಿಂದಲೇ ಜನರು ಉಪವಾಸ ಸ್ಥಳಕ್ಕೆ ಆಗಮಿಸುತ್ತಿದುದು ಕಂಡುಬಂತು. ನೂಕು ನುಗ್ಗಲು ಉಂಟಾಗಿದ್ದರಿಂದ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು.
ಸಭಾಭವನದ ಮುಖ್ಯ ಪ್ರವೇಶ ದ್ವಾರದಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಜನರು ಜಮಾಯಿಸಿದ್ದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಎಂದು ಪೊಲೀಸರು ತಿಳಿಸಿದ್ದಾರೆ. ಸಭಾಭವನದ ಒಳಗೂ ಇಂಥದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಟ ಅಮಿತಾಬ್ ಬಚ್ಚನ್, ಸಂಸದೆ ಜಯಪ್ರದ, ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರಕಾಶ್ ಜಾವ್ಡೇಕರ್, ಶಹನ್ವಾಜ್ ಹುಸೇನ್, ಪಕ್ಷದ ದೆಹಲಿ ಘಟಕದ ಮುಖ್ಯಸ್ಥ ಜಿತೇಂದ್ರ ಗುಪ್ತ, ಜಮ್ಮು-ಕಾಶ್ಮೀರ ಬಿಜೆಪಿ ಉಸ್ತುವಾರಿ ಜಗದೀಶ್ ಮುಖಿ, ಪಕ್ಷದ ಬಿಹಾರ ಘಟಕದ ಅಧ್ಯಕ್ಷ ಸಿ.ಪಿ.ಠಾಕೂರ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮೀನಾಕ್ಷಿ ಲೇಖಿ, ವಿಜಯ್ ಗೋಯಲ್, ಅಶ್ವಿನ್ ಚೌಬೆ, ಅಜಿತ್ ಖತ್ರಿ ಹಾಗೂ ಅರುಣ್ ಸಿಂಗ್ ಮತ್ತಿತರರು ಮೋದಿ ಅವರನ್ನು ಬೆಂಬಲಿಸಿ `ಸದ್ಭಾವನಾ ಉಪವಾಸ~ದಲ್ಲಿ ಪಾಲ್ಗೊಂಡಿದ್ದರು.