ಕೊಳ್ಳೇಗಾಲ: ಗುಜರಾತ್ ಅಭಿವೃದ್ಧಿ ಮಾದರಿಯಲ್ಲಿ ದೇಶವನ್ನು ಪ್ರಗತಿ ಪಥದಲ್ಲಿ ಮುನ್ನಡೆಸಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಮಂತ್ರಿ ಆಗಬೇಕಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ತಿಳಿಸಿದರು.
ರಾಘವೇಂದ್ರ ಭವನದಲ್ಲಿ ಬಿಜೆಪಿ ಟೌನ್ ಸ್ಥಾಯಿಸಮಿತಿ ಅಧ್ಯಕ್ಷರ ಆಯ್ಕೆ ಸಂಬಂಧ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುಪಿಎ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯಲು ಮೋದಿಯವರೇ ಪ್ರಧಾನಿಯಾಗಬೇಕು ಎಂದರು.
ಮುಂದಿನ ಕೆಲವೇ ತಿಂಗಳಲ್ಲಿ 5 ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆ ಬೆನ್ನಲ್ಲೇ ಯಾವ ಗಳಿಗೆಯಲ್ಲಾದರೂ ಲೋಕಸಭೆ ಚುನಾವಣೆ ಬರಲಿದೆ. ಬಿಜೆಪಿ ಮುಖಂಡರು, ಕಾರ್ಯಕರ್ತರು ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಕೂಡಲೇ ಸಂಘಟನೆಗೆ ಮುಂದಾಗಬೇಕು ಎಂದರು.
ಪಟ್ಟಣ ಸ್ಥಾಯಿಸಮಿತಿ ಅಧ್ಯಕ್ಷರ ಹುದ್ದೆಗೆ ಮಹದೇವಪ್ಪ, ನಾಗೇಂದ್ರ, ಸಿ. ಶಿವಕುಮಾರ್, ಬೂದಿತಿಟ್ಟು ಶಿವಕುಮಾರ್ ಇಚ್ಛೆ ವ್ಯಕ್ತಪಡಿಸಿದರು. ಸಭೆಯಲ್ಲಿ ಹೆಚ್ಚಿನ ಕಾರ್ಯಕರ್ತರು ಮತ್ತು ಮುಖಂಡರ ಕೊರತೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾ ಸಮಿತಿಯಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡುವುದಾಗಿ ತೋಂಟದಾರ್ಯ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸಿದ್ದರಾಜು, ರಾಜ್ಯ ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷ ಎ.ಆರ್. ಕೃಷ್ಣಮೂರ್ತಿ, ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ಲೋಕಸಭಾ ಚುನಾವಣಾ ಸಮಿತಿ ಸಂಚಾಲಕ ನಾರಾಯಣಪ್ರಸಾದ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ವೇದಮೂರ್ತಿ, ಶಾಂತರಾಜು, ರಾಜ್ಯ ವೀಕ್ಷಕ ಸಿದ್ದರಾಜು ಇದ್ದರು.