ಚೆನ್ನೈ (ಪಿಟಿಐ): ‘ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಜಯಲಲಿತಾ ಅವರ ಉತ್ತಮ ಸ್ನೇಹಿತ’ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದ ಮಾಜಿ ರಾಜ್ಯಸಭಾ ಸದಸ್ಯ ಕೆ. ಮಲೈಚಾಮಿ ಅವರನ್ನು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಜೆ.ಜಯಲಲಿತಾ ಅವರು ಪಕ್ಷದಿಂದ ಗುರುವಾರ ಉಚ್ಚಾಟನೆ ಮಾಡಿದ್ದಾರೆ.
ಪಕ್ಷದ ಶಿಸ್ತನ್ನು ಉಲ್ಲಂಘಿಸುವ ಮೂಲಕ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿದ್ದರಿಂದ ಮಲೈಚಾಮಿ ಅವರ ಎಐಎಡಿಎಂಕೆಯ ಪ್ರಾಥಮಿಕ ಸದಸ್ಯತ್ವ ವನ್ನು ರದ್ದು ಮಾಡಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.
‘ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಮೋದಿ ಸರ್ಕಾರದಲ್ಲಿ ಎಐಎಡಿಎಂಕೆ ಪ್ರಮುಖ ಪಾತ್ರ ವಹಿಸಲಿದೆ’
ಎಂದು ಮಲೈಚಾಮಿ ಇತ್ತೀಚೆಗೆ ಹೇಳಿದ್ದರು.
ಇನ್ನೊಂದೆಡೆ, ಜಯಲಲಿತಾ ತಮ್ಮ ರಾಜಕೀಯ ನಿಲುವಿನ ಬಗ್ಗೆ ಮೌನ ವಹಿಸಿದ್ದು, ಫಲಿತಾಂಶ ಹೊರಬೀಳುವವರೆಗೆ ಕಾದು ನೋಡುತ್ತೇವೆ ಎಂದು ತಿಳಿಸಿದ್ದಾರೆ.