ಹೈದರಾಬಾದ್ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಅಕ್ಷರಶಃ `ನಗದು' ಮಾಡಿಕೊಳ್ಳುವ ಯತ್ನಕ್ಕೆ ಬಿಜೆಪಿ ಆಂಧ್ರಪ್ರದೇಶ ಘಟಕ ಮುಂದಾಗಿದೆ.
ಇದೇ ಆಗಸ್ಟ್ 11ರಂದು ಇಲ್ಲಿನ ಲಾಲ್ ಬಹದ್ದೂರ ಶಾಸ್ತ್ರಿ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಬಹಿರಂಗ ಸಭೆಯಲ್ಲಿ ಮೋದಿ ಭಾಷಣ ಮಾಡಲಿದ್ದು, ಇದರಲ್ಲಿ ಭಾಗವಹಿಸುವವರು ಐದು ರೂಪಾಯಿ ಕೊಟ್ಟು ನೋಂದಣಿ ಮಾಡಿಕೊಳ್ಳಬೇಕು.`ಬೇರೆ ಪಕ್ಷಗಳ ಮುಖಂಡರು ತಮ್ಮ ಸಭೆಗೆ ಜನರನ್ನು ಹಣ ಕೊಟ್ಟು ಕರೆತರುತ್ತಾರೆ. ಆದರೆ ನಮ್ಮ ವಿಧಾನ ಬೇರೆ. ಸಭೆಯಲ್ಲಿ ಪಾಲ್ಗೊಳ್ಳುವವರಿಗೆ ಬದ್ಧತೆ ಇರಬೇಕು ಹಾಗೂ ಹಾಗೂ ಗಂಭೀರದಿಂದ ವರ್ತಿಸಬೇಕು ಎಂಬ ಹಿನ್ನೆಲೆಯಲ್ಲಿ ಮೋದಿ ಭಾಷಣದ ಕಾರ್ಯಕ್ರಮಕ್ಕೆ ಸಾಂಕೇತಿಕ ಶುಲ್ಕ ನಿಗದಿ ಮಾಡಿದ್ದೇವೆ. ಸಂಗ್ರಹವಾದ ಈ ಮೊತ್ತವನ್ನು ಉತ್ತರಾಖಂಡ ಪ್ರವಾಹ ಪರಿಹಾರ ನಿಧಿಗೆ ನೀಡುತ್ತೇವೆ' ಎಂದು ರಾಜ್ಯ ಬಿಜೆಪಿ ವಕ್ತಾರ ರಾಮಚಂದ್ರರಾವ್ ಸೋಮವಾರ ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.
ಸಾಮಾಜಿಕ ಜಾಲತಾಣಕ್ಕೆ ಮೋದಿ ನೀಡುವ ಮಹತ್ವ ಗಮನದಲ್ಲಿ ಇಟ್ಟುಕೊಂಡು, ಆನ್ಲೈನ್ನಲ್ಲೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ 40,000 ಜನರು ನೋಂದಾಯಿಸಿದ್ದು, ಈ ಸಂಖ್ಯೆ 70,000 ತಲುಪುವ ನಿರೀಕ್ಷೆಯನ್ನು ಪಕ್ಷ ಹೊಂದಿದೆ.