ಅಹಮದಾಬಾದ್ (ಪಿಟಿಐ/ಐಎಎನ್ಎಸ್): ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರು ಶಾಂತಿ, ಒಗ್ಗಟ್ಟು ಹಾಗೂ ಕೋಮುಸಾಮರಸ್ಯಕ್ಕಾಗಿ 72 ಗಂಟೆಗಳ ಉಪವಾಸ ಸತ್ಯಾಗ್ರಹವನ್ನು ಶನಿವಾರ ಬೆಳಿಗ್ಗೆ ಆರಂಭಿಸಿದ್ದಾರೆ.
ತಮ್ಮ 62ನೇ ಹುಟ್ಟುಹಬ್ಬದ ದಿನದಂದು `ಸದ್ಭಾವನಾ ಮಿಷನ್~ ಅಡಿಯಲ್ಲಿ ಇಲ್ಲಿನ ಗುಜರಾತ್ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಬಿಗಿಭದ್ರತೆ ನಡುವೆ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಉಪವಾಸ ಆರಂಭಿಸಿದ್ದಾರೆ.
ಸ್ಥಳಕ್ಕೆ ಬಿಜೆಪಿಯ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳದ ಹಿರಿಯ ನಾಯಕರೂ ಸೇರಿದಂತೆ ಬಿಜೆಪಿಯ ಕೇಂದ್ರ ನಾಯಕರೂ ಪಾಲ್ಗೊಂಡಿದ್ದಾರೆ.
ಅಲ್ಲದೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕೂಡ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ತಮ್ಮ ಇಬ್ಬರು ಸಚಿವರನ್ನು ಉಪವಾಸ ಸ್ಥಳಕ್ಕೆ ಕಳುಹಿಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ ಅಡ್ವಾಣಿ, ಹಿಮಾಚಲಪ್ರದೇಶ ಮುಖ್ಯಮಂತ್ರಿ ಪ್ರೇಮ್ಕುಮಾರ್ ಧುಮಾಲ್, ಲೋಕಸಭೆಯ ಪ್ರತಿಪಕ್ಷ ನಾಯಕಿ ಸುಷ್ಮಾಸ್ವರಾಜ್, ರಾಜ್ಯಸಭೆಯ ಪ್ರತಿಪಕ್ಷ ನಾಯಕ ಅರುಣ್ಜೇಟ್ಲಿ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಖ್ತಾರ್ಅಬ್ಬಾಸ್ ನಖ್ವಿ ಮತ್ತು ಕಾಲ್ರಾಜ್ಮಿಶ್ರಾ, ಪ್ರಧಾನಕಾರ್ಯದರ್ಶಿ ವಿಜಯ್ ಗೋಯಲ್. ರವಿಶಂಕರ್ ಪ್ರಸಾದ್ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸೃತಿ ಇರಾನಿ ಮೊದಲಾದ ಮುಖಂಡರು ಮೊದಲ ದಿನದ ಉಪವಾಸಕ್ಕೆ ಆಗಮಿಸಿದ್ದಾರೆ.