ಕೊರ್ಬಾ (ಛತ್ತೀಸಗಡ) (ಐಎಎನ್ಎಸ್): ಮುಂಬರುವ ಲೋಕಸಭಾ ಚುನಾವಣೆಯ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸುವ ಮೂಲಕ ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅಚ್ಚರಿ ಮೂಡಿಸಿದ್ದಾರೆ.
ಮೋದಿ ಆಯ್ಕೆಯಿಂದ ಮುನಿಸಿ ಕೊಂಡಿದ್ದ ಅಡ್ವಾಣಿ ಅವರ ಮನವೊಲಿಸಲು ಕೆಲವು ನಾಯಕರು ಹಲವು ದಿನಗಳಿಂದ ಕಸರತ್ತು ನಡೆಸುತ್ತಲೇ ಇದ್ದರು. ಈ ಆಯ್ಕೆಯ ನಂತರ ಮೋದಿ ಕುರಿತು ಅಡ್ವಾಣಿ ಮಾಡಿದ ಮೊದಲ ಸಾರ್ವಜನಿಕ ಭಾಷಣ ಇದಾಗಿದೆ.
500 ಮೆಗಾವಾಟ್ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್ ಸ್ಥಾವರವನ್ನು ಸೋಮವಾರ ಇಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿದ ಅಡ್ವಾಣಿ, ‘ಗುಜರಾತ್ನ ಗ್ರಾಮಾಂತರ ಭಾಗಗಳಿಗೆ ಅಭಿವೃದ್ಧಿಯನ್ನು ಕೊಂಡೊಯ್ದ ಮೊದಲ ನಾಯಕ ಮೋದಿ ಅವರಾಗಿದ್ದಾರೆ. ನಾನು ಸಂಸದನಾಗಿ ಆಯ್ಕೆಯಾದ ಗುಜರಾತ್ ರಾಜ್ಯವನ್ನು ಪ್ರಗತಿಪಥದಲ್ಲಿ ಮುನ್ನಡೆಸುವಲ್ಲಿ ಅವರ ಪಾತ್ರ ಮಹತ್ವದ್ದು’ ಎಂದರು.
ಮೋದಿ ಅವರೊಂದಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಹಾಗೂ ಛತ್ತೀಸಗಢ ರಾಜ್ಯದ ಮುಖ್ಯಮಂತ್ರಿ ರಮಣ್ ಸಿಂಗ್ ಅವರೂ ಸಹ ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು.
‘ಈ ಎಲ್ಲರ ಸಾಧನೆ ಹಾಗೂ ಯಶಸ್ಸನ್ನು ಕಾಣಲು ನನಗೆ ಅತೀವ ಸಂತಸವಾಗುತ್ತದೆ’ ಎಂದು ಅಡ್ವಾಣಿ ಹೇಳಿದರು. ಶಿಕ್ಷಣ ಹಾಗೂ ಆರೋಗ್ಯ ಸೇವೆಗಳ ಸುಧಾರಣೆಗೆ ಆದ್ಯತೆ ನೀಡುವಂತೆ ಛತ್ತೀಸಗಡ ಸರ್ಕಾರಕ್ಕೆ ಸಲಹೆ ಮಾಡಿದರು.