ಲಖನೌ (ಪಿಟಿಐ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಿಟ್ಲರ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಮುಸ್ಸೋಲಿನಿ ಎಂದು ಕೇಂದ್ರ ಉಕ್ಕು ಸಚಿವ ಬೇನಿ ಪ್ರಸಾದ್ ವರ್ಮಾ ಹೇಳಿದ್ದಾರೆ.
ಇಬ್ಬರು ನಾಯಕರೂ ಏಕ ಮನೋಭಾವ ಹೊಂದಿದ್ದಾರೆ. ಕೋಮು ಆಧರಿಸಿ ಮತಗಳ ಧ್ರುವೀಕರಣಕ್ಕೆ ಯತ್ನಿಸುತ್ತಿದ್ದಾರೆ ಎಂದು ಬೇನಿ ಆರೋಪಿಸಿದ್ದಾರೆ.
‘ಭಾರತದ ರಾಜಕಾರಣದಲ್ಲಿ ಹಿಟ್ಲರ್ ಜನಿಸಿದ್ದಾರೆ. ಹಾಗೆಯೇ ಉ.ಪ್ರದೇಶದಲ್ಲಿ ಮುಸ್ಸೋಲಿನಿ ಜನಿಸಿದ್ದಾರೆ. ಇಬ್ಬರು ನಾಯಕರ ನಡುವೆ ಗೆಳೆತನ ಇದೆ. ಇಬ್ಬರ ಅವತಾರವೂ ಒಂದೇ ಆಗಿದೆ’ ಎಂದು ಬೇನಿ ಹೇಳಿದ್ದಾರೆ. ಇತ್ತೀಚೆಗೆ ಮುಜಫ್ಫರ್ನಗರದಲ್ಲಿ ನಡೆದ ಗಲಭೆಗೆ ಹಿಟ್ಲರ್ ಮತ್ತು ಮುಸ್ಸೋಲಿನಿ ನಡುವಿನ ಗೆಳೆತನವೇ ಕಾರಣ ಎಂದೂ ಬೇನಿ ಟೀಕಿಸಿದ್ದಾರೆ.
ಮೋದಿ ಗುಜರಾತ್ನ ನಿರಂಕುಶಾಧಿಕಾರಿ. ಮುಸ್ಲಿಮರಿಗೆ ಹಿಟ್ಲರ್ ವಿರುದ್ಧ ಮಾತನಾಡುವ ಧೈರ್ಯ ಇಲ್ಲ. ಹಿಟ್ಲರ್ ಭೀತಿ ಯಾವ ಮಟ್ಟದಲ್ಲಿದೆಯೆಂದರೆ ಬಿಜೆಪಿ ಅಥವಾ ಆರ್ಎಸ್ಎಸ್ನಲ್ಲಿ ಅವರ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದು ಬೇನಿ ಹೇಳಿದ್ದಾರೆ.
ಸರ್ದಾರ್ ಪಟೇಲ್ ಬಗ್ಗೆ ಮೋದಿ ಅವರಿಗೆ ಹೊಸದಾಗಿ ಪ್ರೀತಿ ಆರಂಭವಾಗಿದೆ. ಆದರೆ ಅವರು ಮಹಾತ್ಮಾ ಗಾಂಧಿ ಬಗ್ಗೆ ಮಾತನಾಡುವುದಿಲ್ಲ ಎಂದು ಬೇನಿ ಟೀಕಿಸಿದ್ದಾರೆ.
ಎಲ್.ಕೆ. ಅಡ್ವಾಣಿ ವಿರುದ್ಧವೂ ಬೇನಿ ಟೀಕೆ ಮಾಡಿದ್ದಾರೆ. ಮೋದಿ ಅವರನ್ನು 2014ರ ಲೋಕಸಭೆ ಚುನಾವಣೆಯ ಪ್ರಚಾರ ಸಮಿತಿ ಮುಖ್ಯಸ್ಥರನ್ನಾಗಿ ಮಾಡಿದ ಬಿಜೆಪಿ ಸಂಸದೀಯ ಪಕ್ಷದ ಸಭೆಗೆ ಅಡ್ವಾಣಿ ಹೋಗಿರಲಿಲ್ಲ. ಮೋದಿ ನೇಮಕವನ್ನು ವಿರೋಧಿಸಿ ಅವರು ರಾಜೀನಾಮೆಯನ್ನೂ ನೀಡಿದ್ದರು. ಆದರೆ ಈಗ ಅದೇ ಅಡ್ವಾಣಿ ಏಕತಾ ಓಟಕ್ಕೆ ಚಾಲನೆ ನೀಡಿದ್ದಾರೆ ಎಂದು ಬೇನಿ ಟೀಕಿಸಿದ್ದಾರೆ.
ಬಿಜೆಪಿ ಖಂಡನೆ: ಮೋದಿ ಅವರನ್ನು ಹಿಟ್ಲರ್ಗೆ ಹೋಲಿಸಿರುವುದನ್ನು ಬಿಜೆಪಿ ಖಂಡಿಸಿದೆ. ‘ಇಂತಹ ಹೇಳಿಕೆ ನೀಡುವ ಮೊದಲು ಮೋದಿ ಜನಪ್ರಿಯತೆ ಬಗ್ಗೆ ಬೇನಿ ಯೋಚಿಸಬೇಕಿತ್ತು’ ಎಂದು ಬಿಜೆಪಿ ವಕ್ತಾರ ವಿಜಯ ಬಹದೂರ್ ಪಾಠಕ್ ಹೇಳಿದ್ದಾರೆ. ಬಿಜೆಪಿ ಮತ್ತು ಎಸ್ಪಿ ನಡುವೆ ಒಪ್ಪಂದವಾಗಿದೆ ಎಂದು ಆರೋಪಿಸುವಾಗ ಬೇನಿ ಅವರ ಕಾಂಗ್ರೆಸ್ ಪಕ್ಷವೇ ಮುಲಾಯಂ ಅವರಿಂದ ಬಾಹ್ಯ ಬೆಂಬಲ ಪಡೆದುಕೊಳ್ಳುತ್ತಿದೆ ಎಂಬುದನ್ನು ಬೇನಿ ಪ್ರಸಾದ್ ವರ್ಮಾ ಮರೆಯಬಾರದು ಎಂದೂ ಪಾಠಕ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವೇ ಬೇನಿ ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಪಾಠಕ್ ಕುಟುಕಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.