ಸತತ ಮೂರನೆ ಗೆಲುವು ನರೇಂದ್ರಮೋದಿಯವರನ್ನು ನಿಸ್ಸಂಶಯವಾಗಿ ಬಿಜೆಪಿಯ ಮೊದಲ ಸಾಲಿನ ನಾಯಕರ ಜತೆ ಕೊಂಡೊಯ್ದು ನಿಲ್ಲಿಸಿದೆ. ಆದರೆ ರಾಷ್ಟ್ರನಾಯಕನಾಗಲು ಹೊರಟ ಅವರ ದಾರಿಯಲ್ಲಿ ಹಲವಾರು ತೊಡಕುಗಳಿವೆ. ತಮ್ಮ ನಿಯಂತ್ರಣ ತಪ್ಪಿ ಬೆಳೆಯಬಹುದೆಂಬ ಆತಂಕ ಸಂಘ ಪರಿವಾರದ ಹಿರಿಯರಿಗಿದ್ದರೆ, ತಮ್ಮನ್ನು ಮೂಲೆಗುಂಪು ಮಾಡಬಹುದೆಂಬ ಭೀತಿ ಬಿಜೆಪಿಯ ಹಿರಿಯ-ಕಿರಿಯ ನಾಯಕರಲ್ಲಿದೆ. ಜೆಡಿ (ಯು) ಸೇರಿದಂತೆ ಎನ್ಡಿಎನಲ್ಲಿರುವ ಬಹುತೇಕ ಮಿತ್ರಪಕ್ಷಗಳು ಕೂಡಾ ಮೋದಿ ನಾಯಕತ್ವವನ್ನು ಒಪ್ಪಿಕೊಳ್ಳುವುದು ಕಷ್ಟ
ಮೋದಿ ಸಖ್ಯದಿಂದ ಮುಸ್ಲಿಮ್ ಮತಗಳನ್ನು ಕಳೆದುಕೊಳ್ಳಬಹುದೆಂಬ ಲೆಕ್ಕಾಚಾರ ಆ ಪಕ್ಷಗಳಲ್ಲಿದೆ. ಈ ಅಡೆತಡೆಗಳನ್ನೆಲ್ಲ ಮೀರಿ ನರೇಂದ್ರಮೋದಿ ದೆಹಲಿ ಸೇರಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕು.
ಗುಜರಾತ್ನಲ್ಲಿ ಕಾಂಗ್ರೆಸ್ ಪಕ್ಷದ ಸರಣಿಸೋಲು ಮುಂದುವರಿದಿದೆ. ಕಳೆದ ಇಪ್ಪತ್ತುವರ್ಷಗಳಿಂದ ವನವಾಸ ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಕೂಡಾ ತಲೆ ಎತ್ತಲು ಸಾಧ್ಯವಾಗಿಲ್ಲ. ನರೇಂದ್ರಮೋದಿಯವರಂತಹ ಬಲಿಷ್ಠ ನಾಯಕತ್ವವನ್ನು, ಸ್ಥಳೀಯ ನಾಯಕತ್ವವನ್ನು ಬೆಳೆಸುವ ಮೂಲಕ ಮಾತ್ರ ಎದುರಿಸಲು ಸಾಧ್ಯ ಎಂಬ ಸತ್ಯದ ಅರಿವು ಆ ಪಕ್ಷಕ್ಕೆ ಇನ್ನೂ ಆಗಿಲ್ಲ.
ರಾಹುಲ್ಗಾಂಧಿ ಮ್ಯಾಜಿಕ್ ಬಿಹಾರ, ಉತ್ತರಪ್ರದೇಶಗಳಂತೆ ಇಲ್ಲಿಯೂ ನಡೆಯದಿರುವುದು ಯುವನಾಯಕನ ಸಾಮರ್ಥ್ಯವನ್ನೇ ಸಂಶಯದಿಂದ ನೋಡುವಂತೆ ಮಾಡಿದೆ. ಸೋಲುಗಳಿಂದ ಬಳಲಿರುವ ಕಾಂಗ್ರೆಸ್ ಪಕ್ಷಕ್ಕೆ ಹಿಮಾಚಲಪ್ರದೇಶದ ಗೆಲುವು ಒಂದಿಷ್ಟು ಹುಮ್ಮಸ್ಸನ್ನು ತಂದುಕೊಟ್ಟಿರಬಹುದು. ಆದರೆ ನರೇಂದ್ರ ಮೋದಿಯವರ ಗೆಲುವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರನ್ನು ಎದುರಿಸುವುದು ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವನ್ನಾಗಿ ಮಾಡಿದೆ.